ಬೆಳ್ತಂಗಡಿ: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಶಾಸಕ ಹರೀಶ್ ಪೂಂಜ ಮನವಿ ಮೇರೆಗೆ ಬದುಕು ಕಟ್ಟೋಣ ತಂಡ ಸಹಯೋಗದಲ್ಲಿ ತಾಲೂಕಿನ ಪ್ರಮುಖ ಪೇಟೆ ಹಾಗೂ ಆಯಕಟ್ಟಿನ ಪ್ರದೇಶಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಯಿತು.
ಉಜಿರೆ ಮುಖ್ಯಪೇಟೆಯ ಸುತ್ತಮುತ್ತ ಸ್ವತಃ ಶಾಸಕ ಹರೀಶ್ ಪೂಂಜ ಅವರೇ ಔಷಧಿ ಸಿಂಪಡಿಸಿದರು. ಉಜಿರೆ ಬಸ್ ನಿಲ್ದಾಣ, ಬೆಳ್ತಂಗಡಿ ನಗರ, ಸಂತೆಕಟ್ಟೆ, ಗುರುವಾಯನಕೆರೆ ಸೇರಿದಂತೆ ಜನಸಂದಣಿ ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಔಷಧಿ ಸಿಂಪಡಿಸಲಾಯಿತು. ಶಾಸಕರ ಮನವಿ ಮೇರೆಗೆ ಬದುಕು ಕಟ್ಟೋಣ ತಂಡ ಸಹಕಾರದಲ್ಲಿ ಉದ್ಯಮಿಗಳಾದ ರಾಜೇಶ್ ಪೈ ಹಾಗೂ ಮೋಹನ್ ಕುಮಾರ್ ಉಜಿರೆ ನೇತೃತ್ವದಲ್ಲಿ ಔಷಧಿ ಸಿಂಪಡನೆ ಮಾಡಲಾಯಿತು.
ಸಿಂಪಡಿಸಿದ ದ್ರಾವಣವು 90% ಗಾಳಿಯಲ್ಲಿ ಹಾಗೂ ನೆಲದ ಮೇಲೆ ಇರುವ ರೋಗಾಣುಗಳನ್ನು ನಾಶಪಡಿಸುವಂತಹ ಶಕ್ತಿ ಹೊಂದಿರುವ ಗ್ರಾನ್ವೇಲ್ ಕ್ಲೋರಿನ್ ಆಗಿದೆ ಎಂದು ದ್ರಾವಣ ತಯಾರಿಸಿದ ಅರ್ಚನಾ ರಾಜೇಶ್ ಪೈ ತಿಳಿಸಿದರು. ಮುಗ್ರೋಡಿ ಕನ್ಸ್ಟ್ರಕ್ಷನ್ ವತಿಯಿಂದ ಸ್ಯಾನಿಟೈಸರ್ ತುಂಬಲು ಟ್ಯಾಂಕರ್ ನೀಡಿದ್ದು, ಬದುಕು ಕಟ್ಟೋಣ ಬನ್ನಿ ತಂಡದ 15 ಮಂದಿ ಸದಸ್ಯರು ದ್ರಾವಣ ಸಿಂಪಡಿಸಲು ಸಹಕರಿಸುತ್ತಿದ್ದಾರೆ.
ಇದೇ ರೀತಿ ತಾಲೂಕಿನ ಚಾರ್ಮಾಡಿಯಿಂದ ಪೂಂಜಾಲಕಟ್ಟೆವರೆಗೆ ದ್ರಾವಣ ಸಿಂಪಡಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.