ಮಂಗಳೂರು: ಸದ್ಯ ಬಹರೈನ್ನಲ್ಲಿ ನೆಲೆಸಿರುವ ಮಂಗಳೂರಿನ ಯಕ್ಷಗಾನ ಕಲಾವಿದರೊಬ್ಬರು ಓಟಿಟಿಯಲ್ಲಿ ಯಕ್ಷಗಾನ ಪ್ರದರ್ಶನ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಯಕ್ಷಗಾನದಲ್ಲಿ ಒಬ್ಬರೆ ಒಂಬತ್ತು ಪಾತ್ರಗಳನ್ನು ಮಾಡುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಮಂಗಳೂರಿನ ಯಕ್ಷಗಾನ ಕಲಾವಿದ ದೀಪಕ್ ರಾವ್ ಪೇಜಾವರ ಅವರು ಯಕ್ಷಗಾನ ರಂಗದಲ್ಲಿ ಹೊಸ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಸದ್ಯ ಬಹರೈನ್ನಲ್ಲಿ ಕಾಲೇಜು ಉಪನ್ಯಾಸಕರಾಗಿರುವ ದೀಪಕ್ ರಾವ್ ಪೇಜಾವರ ಅವರು ಕರಾವಳಿಯ ಪ್ರಮುಖ ಕಲೆ ಎಂದು ಪ್ರಸಿದ್ದವಾದ ಯಕ್ಷಗಾನವನ್ನು ಓಟಿಟಿ ಪ್ಲಾಟ್ ಫಾರಂನಲ್ಲಿ ನೀಡಿ, ಜಗತ್ತಿನ ಎಲ್ಲರಿಗೂ ತಲುಪಿಸುವ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.
ಹೊಸ ದಾಖಲೆ:
ಹರಿದರುಶನ ಎಂಬ ಏಕವ್ಯಕ್ತಿ ಯಕ್ಷಗಾನವನ್ನು ಓಟಿಟಿ ಮೂಲಕ ಬಿಡುಗಡೆ ಮಾಡಲು ಚಿಂತಿಸಿದ್ದು, ಇದರ ಶೂಟಿಂಗ್ ಕಾರ್ಯ ಈಗಾಗಲೇ ಮುಗಿದಿದೆ. ಎರಡೂವರೆ ಗಂಟೆಯ ಯಕ್ಷಗಾನ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ಈ ಯಕ್ಷಗಾನ ಪ್ರಸಂಗದಲ್ಲಿ 9 ಪಾತ್ರಗಳಿದ್ದು, ಈ ಎಲ್ಲ ಪಾತ್ರಗಳನ್ನು ಇವರೊಬ್ಬರೆ ನಿರ್ವಹಿಸುವುದು ವಿಶೇಷವಾಗಿದೆ. ಅಲ್ಲದೇ ಇದೊಂದು ಹೊಸ ದಾಖಲೆ ಸೃಷ್ಟಿಸಲಿದೆ. ವೇದಿಕೆಯಲ್ಲಿ ಇಂತಹ ಪಾತ್ರಗಳನ್ನು ಏಕಕಾಲದಲ್ಲಿ ಮಾಡಲು ಅಸಾಧ್ಯ. ಇದಕ್ಕಾಗಿ ಸಿನಿಮಾ ತಂತ್ರಜ್ಞಾನ ಬಳಸಿಕೊಂಡು ದೀಪಕ್ ರಾವ್, ಈ 9 ಪಾತ್ರಗಳನ್ನು ನಿರ್ವಹಿಸಿ ಓಟಿಟಿಯಲ್ಲಿ ಬಿಡುಗಡೆಗೊಳಿಸಲಿದ್ದಾರೆ.
![preparation to release Yakshagana in OTT platform](https://etvbharatimages.akamaized.net/etvbharat/prod-images/kn-mng-01-ott-yakshagana-photo-7202146_02092021084217_0209f_1630552337_3.jpg)
ದೀಪಕ್ ಅವರು ತಮ್ಮ ಮಿತ್ರ ಬರಹಗಾರ ಕಿರಣ್ ಉಪಾಧ್ಯಾಯ ಅವರೊಂದಿಗೆ ಚರ್ಚಿಸಿ ಈ ಪರಿಕಲ್ಪನೆಯಲ್ಲಿ ಯಕ್ಷಗಾನ ಪ್ರದರ್ಶನ ಮಾಡುತ್ತಿದ್ದಾರೆ. ಇದರಲ್ಲಿ ಗೌರಿ ವೆಂಕಟೇಶ್ ಎಂಬ ಛಾಯಗ್ರಾಹಕರು, ದಿಲೀಪ್ ಕುಮಾರ್ ಎಂಬ ಸಂಕಲನಕಾರರು ಕೈಜೋಡಿಸಿದ್ದಾರೆ.
ಬೆಂಗಳೂರಿನ ಸ್ಟುಡಿಯೋವೊಂದರಲ್ಲಿ ಶೂಟಿಂಗ್ ಕಾರ್ಯ ಪೂರ್ಣಗೊಂಡಿದ್ದು, ಸದ್ಯ ಸಂಕಲನ ಕಾರ್ಯ ನಡೆಯುತ್ತಿದೆ. ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ ಭಾಗವತಿಕೆ, ಮುರಾರಿ ಕಡಂಬಳಿತ್ತಾಯ ಅವರು ಚೆಂಡೆ, ಪದ್ಮನಾಭ ಉಪಾಧ್ಯಾಯ ಮದ್ದಳೆಯಲ್ಲಿ ಸಹಕರಿಸಿದ್ದು, ಇದನ್ನು ಸಂಕಲನ ಮಾಡಲು ಕ್ಲಿಷ್ಟಕರವಾದ ಕಾರಣ ಅವರನ್ನು ವಿಡಿಯೋದಲ್ಲಿ ತೋರಿಸಲು ಸಾಧ್ಯವಾಗುತ್ತಿಲ್ಲ.
![preparation to release Yakshagana in OTT platform](https://etvbharatimages.akamaized.net/etvbharat/prod-images/kn-mng-01-ott-yakshagana-photo-7202146_02092021084217_0209f_1630552337_158.jpg)
ಸಾಂಪ್ರದಾಯಿಕ ಸೊಗಡನ್ನು ಉಳಿಸಿಕೊಂಡು, ಯಕ್ಷಗಾನದಲ್ಲಿ ದೀಪಕ್ ರಾವ್ ಪೇಜಾವರ ಅವರು ಹೊಸ ಪ್ರಯೋಗ ಮಾಡುತ್ತಿರುವುದು ಕರುನಾಡ ಮೇರು ಕಲಾ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ವಿದ್ಯುತ್ ಸ್ಪರ್ಶಿಸಿ ಮೂವರು ಮಕ್ಕಳು ಸೇರಿ ಐವರ ದುರ್ಮರಣ.. ಒಬ್ಬರ ಪ್ರಾಣ ಉಳಿಸಲು ಹೋಗಿ ಸಾವು