ಉಪ್ಪಿನಂಗಡಿ: ಸಹಕಾರಿ ಸಂಸ್ಥೆಗಳಿಗೆ ಗ್ರಾಹಕನ ರೀತಿಯಲ್ಲಿ ಭೇಟಿ ನೀಡಿ ನಕಲಿ ಕೋಟೇಡ್ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂಪಾಯಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಬೇರಿಕೆ ಕಾಯಕ್ಕಾಡ್ ನಿವಾಸಿ ಗಿರೀಶ್ ಕುಮಾರ್ ಬಂಧಿತ. ಎರಡು ದಿನಗಳ ಹಿಂದೆ ಕೇರಳ ನಂಬರ್ ಹೊಂದಿರುವ ಕಾರಿನಲ್ಲಿ ಆಗಮಿಸಿದ್ದ ಈತ ಉಪ್ಪಿನಂಗಡಿಯ ಸಹಕಾರಿ ಹಣಕಾಸು ಸಂಸ್ಥೆಯಲ್ಲಿ ನಕಲಿ (ಚಿನ್ನ ಲೇಪನ ಮಾಡಿರುವ) ಚಿನ್ನಾಭರಣ ಅಡಮಾನವಿರಿಸಿ ಸಾಲ ಕೇಳಿದ್ದ.
ನೈಜ ಚಿನ್ನಾಭರಣ ಎಂದು ತಪ್ಪಾಗಿ ತಿಳಿದಿದ್ದ ಆಭರಣ ಸಂಸ್ಥೆಯ ಸಿಬ್ಬಂದಿ ಈತನಿಗೆ ಸಾಲ ನೀಡಿದ್ದರು. ನಂತರ ಆತ ನೀಡಿದ ಸೊತ್ತು ಅಸಲಿ ಚಿನ್ನಾಭರಣ ಅಲ್ಲ ಎಂದು ಗೊತ್ತಾದ ವೇಳೆಗಾಗಲೇ ಆರೋಪಿ ಪರಾರಿಯಾಗಿದ್ದ. ವಂಚನೆಗೆ ಒಳಗಾಗಿರುವ ಎರಡು ಸಹಕಾರಿ ಸಂಸ್ಥೆಗಳು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದವು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿರುವ ಪೊಲೀಸರು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.