ಬೆಳ್ತಂಗಡಿ: ಆತ್ಮ ನಿರ್ಭರ ಯೋಜನೆಯಡಿಯಲ್ಲಿ ಮೀನುಗಾರಿಕೆಯಲ್ಲಿ ರಾಜ್ಯವು 1ನೇ ಸ್ಥಾನಕ್ಕೆ ಬರುವಂತೆ ಪ್ರಯತ್ನಿಸಲಾಗುವುದು. ಯಾವುದೇ ಸಾಮಾಜಿಕ ಯೋಜನೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಾದರಿಯಾಗಿದೆ. ಮೀನುಗಾರಿಕಾ ಇಲಾಖೆ ಹೊಸ ಹೆಜ್ಜೆ ಇಟ್ಟಿದ್ದು, ಇಂದಿನ ಕಾರ್ಯಕ್ರಮದಿಂದ ಆತ್ಮವಿಶ್ವಾಸ ಇಮ್ಮಡಿಯಾಗಿದೆ ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಭಾನುವಾರ ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತೋದ್ಯಾನದಲ್ಲಿನ ಮತ್ಸ್ಯ ಪ್ರದರ್ಶನಾಲಯದಲ್ಲಿ ಅಲಂಕಾರಿಕ ಮೀನುಗಳನ್ನು ಕೊಳಕ್ಕೆ ಬಿಡುವುದರ ಮೂಲಕ ಉದ್ಘಾಟಿಸಿದರು. ದೇಶದಲ್ಲಿ ರಾಜ್ಯವು ಒಳನಾಡು ಮೀನುಗಾರಿಕೆಯಲ್ಲಿ 9ನೇ ಸ್ಥಾನದಲ್ಲಿದ್ದು, ಕಡಲ ಮೀನುಗಾರಿಕೆಯಲ್ಲಿ 4ನೇ ಸ್ಥಾನದಲ್ಲಿದೆ. ಇದನ್ನು ಆತ್ಮ ನಿರ್ಭರ ಯೋಜನೆಯಡಿಯಲ್ಲಿ 1ನೇ ಸ್ಥಾನಕ್ಕೆ ಬರುವಂತಹ ಪ್ರಯತ್ನಗಳು ನಡೆಯುತ್ತಿವೆ. ಪ್ರಧಾನಿ ಮೋದಿಯವರು ಆತ್ಮ ನಿರ್ಭರ ಭಾರತ ಯೋಜನೆಯಡಿ 20 ಸಾವಿರ ಕೋಟಿ ರೂ. ಇಡೀ ದೇಶಕ್ಕೆ ನೀಡಿದ್ದು, ಅದರಲ್ಲಿ 3.5 ಸಾವಿರ ಕೋಟಿ. ರೂ. ಕರ್ನಾಟಕಕ್ಕೆ ನೀಡಿದ್ದಾರೆ ಎಂದರು.
ಉಳ್ಳಾಲದಿಂದ ಕಾರವಾರದವರೆಗೆ ಸಮುದ್ರ ಕಿನಾರೆಯಲ್ಲಿ ಮತ್ಸ್ಯ ಸಂಪಾದನೆಗೆ ಆದ್ಯತೆ ನೀಡಲಾಗುವುದು. ಕೇಂದ್ರ ಸರ್ಕಾರ ನೀಡಿದ 3.5 ಕೋಟಿ ರೂ. ಅನುದಾನದಲ್ಲಿ ಸುಮಾರು 10 ಸಾವಿರ ಮಂದಿಗೆ ಉದ್ಯೋಗಾವಕಾಶ ಸಿಗಲಿದೆ. ಈಗಾಗಲೇ ಮೀನಿನ ಚಿಪ್ಸ್ಗೆ ಭಾರೀ ಬೇಡಿಕೆ ಇರುವುದನ್ನು ವಿವರಿಸಿದರು. ಸರ್ಕಾರಗಳು ಮಾಡುವ ಕೆಲಸಗಳನ್ನು ಶ್ರೀಕ್ಷೇತ್ರದ ಮೂಲಕ ಡಾ. ಹೆಗ್ಗಡೆಯವರು ಮಾಡುತ್ತಿದ್ದಾರೆ. ಸಮರ್ಪಣಾ ಮನೋಭಾವದಲ್ಲಿ ಕೆಲಸ ಮಾಡುವ ಕೇಂದ್ರ ಶ್ರೀಕ್ಷೇತ್ರ ಧರ್ಮಸ್ಥಳ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪ್ರಾಣಿ-ಪಕ್ಷಿಗಳ ಸಾಕುವಿಕೆಯಿಂದ ನಮ್ಮಲ್ಲಿನ ಮಾನಸಿಕ ಒತ್ತಡಗಳು ದೂರವಾಗುತ್ತವೆ. ಹೀಗಾಗಿ ಹಲವಾರು ಕಾರ್ಪೋರೇಟ್ ಕಂಪೆನಿಗಳಲ್ಲಿ ಅಕ್ವೇರಿಯಂ ಇರುವುದನ್ನು ಗಮನಿದ್ದೇನೆ. ಮಾನಸಿಕ ಒತ್ತಡ ನಿವಾರಿಸಲು ಇದು ಸಹಕಾರಿ. ಸರ್ಕಾರ ನಗರ ಪ್ರದೇಶಗಳಲ್ಲಿ ಮತ್ಸ್ಯಗಾರವನ್ನು ಸ್ಥಾಪಿಸುವಂತೆ ಸಚಿವರಿಗೆ ಸಲಹೆ ನೀಡಿದರು.
ಕ್ಷೇತ್ರಕ್ಕೆ ಬಂದ ಭಕ್ತಾದಿಗಳ ಮನಸೋಲ್ಲಾಸಕ್ಕೆ ಲಲಿತೋದ್ಯಾನವನ್ನು ಕೀರ್ತಿ ಶೇಷ ದಿ. ಮಂಜಯ್ಯ ಹೆಗ್ಗಡೆ ಪ್ರಾರಂಭಿಸಿದರು. ಇಲ್ಲಿ ದೇವರ ಕಟ್ಟೆ ಇದ್ದು, ವರ್ಷಕ್ಕೆ ಎರಡು ಬಾರಿ ದೇವರ ಉತ್ಸವ ಮೂರ್ತಿಯ ಸವಾರಿ ನಡೆಯುತ್ತದೆ. ಲಲಿತೋದ್ಯಾನದಲ್ಲಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ದಣಿದ ಮನಸ್ಸನ್ನು ತಣಿಸಲು ಮತ್ಸ್ಯ ಪ್ರದರ್ಶನಾಲಯವೂ ಇದೆ. ಇದರ ವೀಕ್ಷಣೆಯಿಂದ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಬಹುದು ಎಂದ ಅವರು, ಅಲಂಕಾರಿಕ ಮೀನುಗಳನ್ನು ಕೆರೆ, ನದಿ, ಸಮುದ್ರದಲ್ಲಿ ನೋಡಲು ಸಾಧ್ಯವಿಲ್ಲ. ಪ್ರೀತಿ, ಕಳಕಳಿ ಇದ್ದರೆ ಮನೆಯಲ್ಲೇ ಮತ್ಸ್ಯ ಸಾಕುವ ಹವ್ಯಾಸ ಬೆಳೆಯಬೇಕು ಎಂದರು.