ಮಂಗಳೂರು: ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರ್ಕಾರ ಹಿಂದೂ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ದೇವಾಲಯಗಳ ಜಮೀನುಗಳನ್ನು ಕಬಳಿಸಿ ಏಲಂಮಾಡಿ, ಚರ್ಚ್ಗೆ ನೀಡಲಾಗುತ್ತಿದೆ. ಇದು ಸಂವಿಧಾನ ವಿರೋಧಿಯಾಗಿದೆ ಎಂದು ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ರಾಷ್ಟ್ರಾದ್ಯಂತ ಹೋರಾಟ ನಡೆಸಲಿದೆ ಎಂದು ವಿಎಚ್ಪಿ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದರು.
ಕ್ರಿಶ್ಚಿಯನ್ ಚರ್ಚ್ಗಳಿಗೆ ಬ್ರಿಟಿಷ್ ಸರ್ಕಾರ 99 ವರ್ಷ ಗುತ್ತಿಗೆ ಆಧಾರದಲ್ಲಿ ನೀಡಿತ್ತು. ಇದರ ಅವಧಿ 1994 ಇಸವಿಗೆ ಮುಗಿದರೂ ಇನ್ನೂ ಆ ಆಸ್ತಿ ಸರ್ಕಾರದ ಪರಭಾರೆಯಾಗಿಲ್ಲ. ಮುಸ್ಲಿಂ ವಕ್ಫ್ ಬೋರ್ಡ್ ನಲ್ಲಿಯೂ, ಚರ್ಚ್ ಗಳಲ್ಲಿಯೂ ಬೇಕಾದಷ್ಟು ಆಸ್ತಿ, ಜಮೀನುಗಳು ಇದ್ದರೂ, ಅವರು ಹಿಂದೂ ದೇವಾಲಯಗಳ ಜಮೀನನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಜನರು ದಾನ ಅಥವಾ ದೇಣಿಗೆಯಾಗಿ ನೀಡಿದ ಆಸ್ತಿಯಲ್ಲಿ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಲ್ಲಾಗಳಿಗೆ ಹಾಗೂ ಮಸೀದಿಗಳಲ್ಲಿ ಬಾಂಗ್ ನೀಡುವವರಿಗೆ 5 ಸಾವಿರ ರೂ. ನೀಡಲಾಗುತ್ತದೆ. ತೆರಿಗೆ ಹಣವನ್ನ ಇತರ ಧರ್ಮೀಯರಿಗೆ ನೀಡುವುದು ಸಂವಿಧಾನ ವಿರೋಧಿಯಾಗಿದೆ. ಅಲ್ಲದೇ ಸಂವಿಧಾನದ 25 (ಎ)ವಿಧಿಯ ಪ್ರಕಾರ ಯಾವುದೇ ರೀತಿಯಲ್ಲಿ ಬೇರೆ ಧರ್ಮೀಯರನ್ನು ಮತಾಂತರ ಮಾಡುವಂತಿಲ್ಲ. ಆದರೆ, ಕ್ರಿಶ್ಚಿಯನ್ನರು ಮತಾಂತರ ಮಾಡುತ್ತಲೇ ಇದ್ದಾರೆ ಎಂದು ಕಿಡಿಕಾರಿದರು.
ತಿರುಪತಿ ಹಾಗೂ ಶ್ರೀಶೈಲಂ ದೇವಾಲಯಗಳಲ್ಲಿ ದೇವರ ಮೇಲೆ ನಂಬಿಕೆ ಇಲ್ಲದವರು, ಹಿಂದೂ ಧರ್ಮ ವಿರೋಧಿಗಳು ಆಡಳಿತ ಸಮಿತಿಯಲ್ಲಿದ್ದಾರೆ. ಇಲ್ಲಿ ಕ್ರಿಶ್ಚಿಯನ್ ಸಿಎಂ ಬಂದ ಬಳಿಕ ದೇವಾಲಯಗಳಲ್ಲಿ ಹಿಂದೂಯೇತರರು ದೇವಾಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಐದು ವರ್ಷಗಳಿಂದ ಮಂಗಳೂರಿನ ಸಂಘನಿಕೇತನದಲ್ಲಿ ನಡೆಯುತ್ತಿರುವ ವಿಎಚ್ಪಿ ಬೈಠಕ್ ಇಂದು ಮುಕ್ತಾಯಗೊಂಡಿದೆ. ದೇಶ ವಿದೇಶಗಳಿಂದ ಬಂದಿರುವ ಪ್ರತಿನಿಧಿಗಳು ಈ ಬೈಠಕ್ ನಲ್ಲಿ ಮತಾಂತರ, ಹಿಂದೂ ಮಹಿಳೆಯರ ಅಪಹರಣ, ಗೋಹತ್ಯೆ, ರಾಮ ಮಂದಿರ ನಿರ್ಮಾಣ ಮುಂತಾದ ಮಹತ್ವದ ವಿಚಾರಗಳ ಬಗ್ಗೆ ಮುಂದಿನ ನಾಲ್ಕೈದು ವರ್ಷಗಳಲ್ಲಿ ವಿಎಚ್ ಪಿ ಕೈಗೊಳ್ಳಲಿರುವ ಕಾರ್ಯವಿಧಾನಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಹೇಳಿದರು.