ಮಂಗಳೂರು: ಕತಾರ್ನಲ್ಲಿ ಸುಮಾರು 32 ವರ್ಷಗಳಿಂದ ಟೈಲರಿಂಗ್ ಉದ್ಯಮ ನಡೆಸುತ್ತಿದ್ದ ಮೂಡುಬಿದಿರೆ ಮೂಲದ ವ್ಯಕ್ತಿಯೋರ್ವರು ಕಿಡ್ನಿ ವೈಫಲ್ಯದಿಂದ ಜುಲೈ 30ರಂದು ಮೃತಪಟ್ಟಿದ್ದು, ಅವರ ಪಾರ್ಥಿವ ಶರೀರ ಇಂದು ಹುಟ್ಟೂರು ತಲುಪಿದೆ.
ಮೂಡಬಿದಿರೆ ನಿವಾಸಿ ಹೂವಯ್ಯ ಮೊಯ್ಲಿ ಎಂಬುವವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ಕತಾರ್ನ ಹಮದ್ ಮೆಡಿಕಲ್ ಕಾರ್ಪೋರೇಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.
ಕೊರೊನಾ ಅಡೆತಡೆಯಿಂದಾಗಿ ವಿಮಾನದ ಮೂಲಕ ಪಾರ್ಥಿವ ಶರೀರವನ್ನು ತರಲು ವಿಳಂಬವಾಗಿತ್ತು. ಮೊದಲಿಗೆ ಆಗಸ್ಟ್ 3ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪಾರ್ಥಿವ ಶರೀರವನ್ನು ಕಳುಹಿಸಲು ಬೇಕಾದ ಎಲ್ಲ ಏರ್ಪಾಡುಗಳನ್ನು ಮಾಡಲಾಗಿತ್ತು. ಕೊನೆಯ ಕ್ಷಣದಲ್ಲಿ ವಿಮಾನ ರದ್ದಾಗಿತ್ತು. ಬಳಿಕ ಆ.5ರಂದು ಕಣ್ಣೂರು ವಿಮಾನಕ್ಕೆ ಕಳುಹಿಸುವುದೆಂದು ನಿರ್ಧರಿಸಲಾಯಿತು. ಆದರೆ, ಕಣ್ಣೂರು ವಿಮಾನ ನಿಲ್ದಾಣದಲ್ಲಿ ಪಾರ್ಥಿವ ಶರೀರವನ್ನು ಪಡೆದು ಹಸ್ತಾಂತರಿಸಲು ಸೂಕ್ತ ವ್ಯವಸ್ಥೆ ಹಾಗೂ ಅನುಮತಿ ಇಲ್ಲದ ಕಾರಣ, ಮಂಗಳೂರಿನ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ, ಮಾಜಿ ಸಚಿವ ಯು.ಟಿ .ಖಾದರ್ ಅವರ ನೆರವು ಕೋರಲಾಯಿತು. ಇಬ್ಬರೂ ಕೂಡಲೇ ಸ್ಪಂದಿಸಿದ್ದು, ಸಂಸದರು ಕೇಂದ್ರ ವಿದೇಶಾಂಗ ರಾಜ್ಯ ಸಚಿವ ಮುರಳೀಧರನ್ ಅವರನ್ನು ಸಂಪರ್ಕಿಸಿ ಸೂಕ್ತ ಅನುಮತಿಯನ್ನು ಕೊಡಿಸುವಲ್ಲಿ ಸಫಲರಾಗಿದರು. ಪಾರ್ಥಿವ ಶರೀರ ಯಾವುದೇ ಅಡೆತಡೆ ಇಲ್ಲದೆ ಅವರ ಹುಟ್ಟೂರಾದ ಮೂಡುಬಿದಿರೆಯನ್ನು ತಲುಪಿದೆ. ಕಣ್ಣೂರು ವಿಮಾನ ನಿಲ್ದಾಣದ ಇತಿಹಾಸದಲ್ಲಿ ಮೊದಲನೇ ಬಾರಿಗೆ ಪಾರ್ಥಿವ ಶರೀರವನ್ನು ಪಡೆದು ಹಸ್ತಾಂತರಿಸಲು ಬೇಕಾದ ಅನುಮತಿ ಹಾಗೂ ವ್ಯವಸ್ಥೆ ಒಂದೇ ದಿನದಲ್ಲಿ ದೊರಕಿದೆ.