ಮಂಗಳೂರು : ಕ್ರಿಕೆಟ್ ಲೋಕದ ಕೋಲ್ಮಿಂಚು, ಕುಡ್ಲದ ಹುಡುಗ ಕೆ.ಎಲ್.ರಾಹುಲ್ ಅಂದರೆ ಯಾರಿಗೆ ತಾನೇ ತಿಳಿದಿಲ್ಲ. ಕ್ರಿಕೆಟ್ ಜಗತ್ತಿನಲ್ಲಿ ರಾಹುಲ್ ಮನೆ ಮಾತಾಗಿದ್ದಾರೆ. ಆದರೆ, ರಾಹುಲ್ ಮೊದಲ ಬಾರಿಗೆ ಆಡಲೆಂದು ಕ್ರೀಡಾಂಗಣಕ್ಕೆ ಇಳಿದಾಗ ಅವರಿಗೆ ಅಂಪೈರ್ ಆಗಿದ್ದವರು ಯಾರೆಂದು ಯಾರಿಗೂ ತಿಳಿದಿರಲಿಕ್ಕಿಲ್ಲ.
2002 ರಲ್ಲಿ ಕೆ.ಎಲ್.ರಾಹುಲ್ ತಮ್ಮ 13ನೇ ವಯಸ್ಸಿನಲ್ಲಿ ಮೊದಲ ಕ್ರಿಕೆಟ್ ಪಂದ್ಯ ಮಂಗಳೂರಿನ ನೆಹರೂ ಮೈದಾನದಲ್ಲಿ ಆಡಿದ್ದರು. ಅಂದು ಅವರಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದವರು ಮೂಲತಃ ಕಾಸರಗೋಡು ಮಂಜೇಶ್ವರದವರಾದ ಪ್ರಸ್ತುತ ಸುರತ್ಕಲ್ ಸಮೀಪದ ಹೊಸಬೆಟ್ಟು ಕೆರೆಕಾಡು ನಿವಾಸಿ ಸಂತೋಷ್ ಕುಮಾರ್ ಮಂಗಲ್ಪಾಡಿಯವರು. ಕೆ.ಎಲ್.ರಾಹುಲ್ ಅವರೂ ಕೂಡಾ ಸುರತ್ಕಲ್ನವರು ಎನ್ನುವುದು ವಿಶೇಷ.
ಕೆ.ಎಲ್.ರಾಹುಲ್ ಆಡಿರುವ ಮೊದಲ ಕೆಎಸ್ಸಿಎ (ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ) ಮಂಗಳೂರು ವಲಯ 13ರ ಕ್ರಿಕೆಟ್ ಪಂದ್ಯಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಅಂದು ಮೊದಲ ಪಂದ್ಯಕೂಟದ ಅಂಪೈರ್ಗಳಾಗಿ ಕೆರೆಕಾಡು ನಿವಾಸಿ ಸಂತೋಷ್ ಕುಮಾರ್ ಮಂಗಲ್ಪಾಡಿ ಮಾತ್ರವಲ್ಲದೇ, ಉಳ್ಳಾಲ ಕೆ. ಯಶೋಧರ ಅವರು ಕೂಡಾ ಕಾರ್ಯನಿರ್ವಹಿಸಿದ್ದರು. ಆಗ ಕಸ್ತೂರಿ ಬಾಲಕೃಷ್ಣ ಪೈ ದ.ಕ.ಜಿಲ್ಲಾ ಕ್ರಿಕೆಟ್ ಸಂಸ್ಥೆಯ ವ್ಯವಸ್ಥಾಪಕರಾಗಿದ್ದರು.
ಅಲ್ಲದೆ, ಕೆಲವರ್ಷದ ಬಳಿಕ ಮೂಡುಬಿದಿರೆಯಲ್ಲಿ ನಡೆದ ಕೆಎಸ್ಸಿಎ ಓಪನ್ ಟೂರ್ನಮೆಂಟ್ ಹಾಗೂ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಅವರು ಭಾಗವಹಿಸಿದ್ದರು. ಅದಕ್ಕೂ ಅಂಪೈರ್ ಆಗಿ ಸಂತೋಷ್ ಕುಮಾರ್ ಮಂಗಲ್ಪಾಡಿ ಕಾರ್ಯ ನಿರ್ವಹಿಸಿದ್ದರು.
ಕೆ.ಎಲ್.ರಾಹುಲ್ ಮೊದಲ ಪಂದ್ಯದಲ್ಲಿ ನೀಡಿದ ಕಾರ್ಯಕ್ಷಮತೆಯ ಬಗ್ಗೆ ನೆನಪಿಸಿದ ಅಂಪೈರ್ ಸಂತೋಷ್ ಕುಮಾರ್ ಮಂಗಲ್ಪಾಡಿಯವರು, ಮೊದಲ ಮ್ಯಾಚ್ನಲ್ಲಿ ರಾಹುಲ್ ಬ್ಯಾಟಿಂಗ್ ವೈಖರಿ ಚೆನ್ನಾಗಿತ್ತು. ಎರಡು ಕವರ್ ಡ್ರೈವ್ ಕೂಡಾ ಹೊಡೆದಿದ್ದರು, ಅನಿರೀಕ್ಷಿತವಾಗಿ ಅವರು ರನ್ ಔಟ್ ಆದರು. ಅಂದು ಪಿಚ್ ಮಧ್ಯೆ ಬಂದು ಮತ್ತೆ ಹಿಂದೆ ಹೋಗಲು ಸಾಧ್ಯವಾಗದೇ ರನ್ ಔಟ್ ಆಗಿರೋದು ಈಗಲೂ ನೆನಪಿದೆ. ಬಳಿಕ, ಬೆಂಗಳೂರು ಅಂಡರ್ 13 ಝೋನಲ್ ಮ್ಯಾಚ್ ನಲ್ಲಿ 200 ರನ್ ಹೊಡೆದಿದ್ದರು. ಇದು ಅವರಿಗೆ ಟರ್ನಿಂಗ್ ಪಾಯಿಂಟ್ ಆಯಿತು. ಅದೇ ಮ್ಯಾಚ್ನ್ನು ರಾಹುಲ್ ದ್ರಾವಿಡ್ ಕೂಡಾ ವೀಕ್ಷಿಸಿದ್ದರು ಎಂದು ಹೇಳಿದರು.
ಶಿಸ್ತು, ತಾಳ್ಮೆ ಹಾಗೂ ಸತತ ಪರಿಶ್ರಮದಿಂದ ಕೆ.ಎಲ್.ರಾಹುಲ್ ಅವರು ಭಾರತ ಕ್ರಿಕೆಟ್ ತಂಡದ ಉಪನಾಯಕನ ಮಟ್ಟಕ್ಕೆ ಬೆಳೆದಿದ್ದು, ಮುಂದಕ್ಕೆ ನಾಯಕರಾಗುವ ಎಲ್ಲಾ ಅರ್ಹತೆಗಳಿವೆ. ಹೆಚ್ಚು ಮಾತಿಲ್ಲದ ವ್ಯಕ್ತಿತ್ವದ ಅವರದ್ದು. ಎಲ್ಲರೊಂದಿಗೂ ಹೊಂದಾಣಿಕೆಯ ಸ್ವಭಾವವುಳ್ಳವರು. ಕೇವಲ ಕ್ರಿಕೆಟ್ ಬಗ್ಗೆ ಮಾತ್ರ ಚಿಂತಿಸುತ್ತಿದ್ದರು. ಇದೇ ಅವರ ಪ್ಲಸ್ ಪಾಯಿಂಟ್ ಎಂದು ಸಂತೋಷ್ ಕುಮಾರ್ ಮಂಗಲ್ಪಾಡಿ ಹೇಳುತ್ತಾರೆ.