ಮಂಗಳೂರು: ಮಂಗಳೂರಿನಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ. ಕೇರಳದಲ್ಲಿ ಸಮುದ್ರ ತೀರ, ನದಿ ತೀರಗಳ ಮೂಲಕ ಪ್ರವಾಸೋದ್ಯಮ ಯಶಸ್ವಿಯಾಗಿ ನಡೆಯುತ್ತಿದೆ. ಅದರ ಪ್ರೇರಣೆಯಾಗಿ ಜಿಲ್ಲೆಯಲ್ಲಿಯೂ ಕೇರಳ ಮಾದರಿಯಲ್ಲಿ ದೋಣಿ ವಿಹಾರ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ.
ವಿಶೇಷ ಆಕರ್ಷಣೆಯುಳ್ಳ ದೋಣಿಗಳು, ನೋಡಲು ಸುಂದರವಾದ ಕಲಾಕೃತಿಗಳು, ನದಿಯ ಹಿನ್ನೀರಿನ ಸೊಬಗು ಹೀಗೆ ವಿಶೇಷ ಆಕರ್ಷಣೆಗಳನ್ನಿಟ್ಟುಕೊಂಡು ಪ್ರವಾಸೋದ್ಯಮವನ್ನು ಸೆಳೆಯುವ ಪ್ರಯತ್ನ ನಗರದಲ್ಲಿ ಆರಂಭವಾಗಿದೆ. ಕೇರಳದಲ್ಲಿ ದೋಣಿ ವಿಹಾರಗಳು ಪ್ರವಾಸೋದ್ಯಮಕ್ಕೆ ದೊಡ್ಡ ಕೊಡುಗೆ ನೀಡಿದೆ. ಅಲ್ಲಿರುವ ಹಾಗೆಯೇ ಮಂಗಳೂರಿನಲ್ಲಿಯೂ ಪ್ರವಾಸೋದ್ಯಮ ಚಿಗುರಬೇಕು ಎಂಬ ಉದ್ದೇಶದಿಂದ ಸಮೃದ್ಧಿ ವಾಟರ್ ಸ್ಪೋರ್ಟ್ ಸಂಸ್ಥೆ ದೋಣಿ ವಿಹಾರ ಶುರು ಮಾಡುತ್ತಿದೆ. ಕೂಳೂರು ಸೇತುವೆ ಬಳಿಯ ತಣ್ಣೀರುಬಾವಿ ಕ್ರಾಸ್ನಲ್ಲಿ ದೋಣಿ ವಿಹಾರ ಕೇಂದ್ರದಿಂದ ವಿಹಾರ ಆರಂಭಿಸಲು ಸಿದ್ಧತೆ ನಡೆಯುತ್ತಿದ್ದು, ಜ.02 ರಿಂದ ಕಾರ್ಯಾರಂಭ ಮಾಡಲಿದೆ.
ಓದಿ: ಗ್ರಾ.ಪಂ. ಚುನಾವಣೆಯಲ್ಲಿ ಪತ್ನಿ ಅವಿರೋಧ ಆಯ್ಕೆ: ಸಂಭ್ರಮಿಸಬೇಕಾಗಿದ್ದ ಪತಿಯೇ ಆತ್ಮಹತ್ಯೆ!
ಮಂಗಳೂರಿನ ಪಿ.ಶಿವಕುಮಾರ್ ಪೈಲೂರು ಮತ್ತು ಕುಶಲ್ ಪೂಜಾರಿ ಅವರು ಸೇರಿಕೊಂಡು ದೋಣಿ ವಿಹಾರ ಅರಂಭಿಸಿದ್ದು, ಸದ್ಯ ನಾಲ್ಕು ದೋಣಿಗಳನ್ನು ಕೇರಳದ ನುರಿತ ತಜ್ಣರಿಂದ ಅಲಂಕರಿಸಲಾಗಿದೆ. ಈ ದೋಣಿಗಳಲ್ಲಿ ಪ್ರವಾಸಿಗರನ್ನು ಉಳ್ಳಾಲ, ಮರವೂರುವರೆಗೆ ಕೊಂಡೊಯ್ದು ನಡುವೆ ಸಿಗುವ ಪ್ರವಾಸಿ ತಾಣಗಳಲ್ಲಿ ಸಂಭ್ರಮಿಸಲು ಅವಕಾಶ ನೀಡಲಾಗುತ್ತದೆ. ಪ್ರತಿ ದೋಣಿಯಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಲೈಫ್ಗಾರ್ಡ್ ಕೂಡ ಜೊತೆಗಿರುತ್ತಾರೆ.
![Kerala-style boat travel Started in Mangalore](https://etvbharatimages.akamaized.net/etvbharat/prod-images/kn-mng-01-boat-tourism-spl-7202146_15122020190105_1512f_02851_822.jpg)
ದೋಣಿ ವಿಹಾರ ಮುಗಿಸಿದ ಬಳಿಕ ಪ್ರವಾಸಿಗರಿಗೆ ಮನೋರಂಜನೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ 6.30 ರ ಬಳಿಕ ಪ್ರಾಜೆಕ್ಟರ್ ಮೂಲಕ ತುಳುನಾಡ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಒಂದೂವರೆ ಎಕರೆ ಪ್ರದೇಶದಲ್ಲಿ ಕಲಾಕೃತಿಗಳ ಮೂಲಕ ಅಲಂಕರಿಸಿರುವ ಪ್ರದೇಶದಲ್ಲಿ ಸಿದ್ಧತೆಗಳು ನಡೆದಿದೆ.