ಮಂಗಳೂರು: ವಿಶ್ವಹಿಂದೂ ಪರಿಷತ್, ರಾಷ್ಟ್ರೀಯ ಸೇವಾ ಸಂಘ ಹಾಗೂ ಇತರ ಹಿಂದೂ ಸಂಘಟನೆಗಳ ಅವಿರತ ಹೋರಾಟದ ಫಲವಾಗಿ ಸುಪ್ರೀಂಕೋರ್ಟ್ನಲ್ಲಿ ಇಂದು ರಾಮ ಮಂದಿರದ ಪರವಾಗಿ ತೀರ್ಪು ಹೊರಬಂದಿದೆ ಎಂದು ವಿಎಚ್ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ ಕೋಕ್ಜೆ ಹೇಳಿದ್ದಾರೆ.
ನಗರದ ಸಂಘನಿಕೇತನದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದರ ಬಗ್ಗೆ ಎಲ್ಲರ ಮಾರ್ಗದರ್ಶನ ಅಗತ್ಯವಿದ್ದು ಈ ಬಗ್ಗೆ ಎರಡು ದಿನಗಳ ಕಾಲ ಅಂತಾರಾಷ್ಟ್ರೀಯ ಬೈಠಕ್ ನಲ್ಲಿ ಚರ್ಚೆ ನಡೆಸಲಾಗುತ್ತದೆ. ಗೋಹತ್ಯೆಯ ಬಗ್ಗೆಯೂ ಸಮಗ್ರವಾಗಿ ಚಿಂತನೆ ನಡೆಸಲಾಗುತ್ತದೆ. ಹಿಂದೂ ಸಮಾಜದ ಮೇಲಾದ ಆಕ್ರಮಣಗಳ ಬಗ್ಗೆ ಬೌದ್ಧಿಕವಾಗಿ ಚರ್ಚೆ ನಡೆಸಲಾಗುತ್ತದೆ. ಮೊದಲು ಹಿಂದೂ ಎಂದು ಹೇಳಲು ಸಂಕೋಚವಿತ್ತು. ಇಂದು ಆ ಮನೋಭಾವನೆ ದೂರವಾಗಿದ್ದು, ಭಾರತದಲ್ಲಿ ಮಾತ್ರವಲ್ಲ ಹೊರ ದೇಶಗಳಲ್ಲೂ ತಾವೂ ಹಿಂದೂ ಎಂದು ಹೇಳಲು ಧೈರ್ಯ ಬಂದಿದೆ ಎಂದರು.
ಇದೇ ವೇಳೆ, ಪೇಜಾವರದ ಕಿರಿಯ ಶ್ರೀ, ವಿಶ್ವ ಪ್ರಸನ್ನ ತೀರ್ಥರು ಮಾತನಾಡಿ, ವಿದೇಶಿಯರ ಆಕ್ರಮಣದಿಂದ ಭಾರತೀಯ ಸಂಸ್ಕೃತಿ ಕೆಲಕಾಲ ಮಂಕಾಗಿತ್ತು. ಆದರೆ, ಮತ್ತೆ ಅದರ ಪುನರುತ್ಥಾನವಾಗಲು ವಿಎಚ್ಪಿಯ ಬಹುದೊಡ್ಡ ಕೊಡುಗೆ ಇದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ರಾಮ ಮಂದಿರ ನಿರ್ಮಾಣಕ್ಕೆ ಇಷ್ಟೊಂದು ತಡೆ ಬರಲು ರಾಮನ ಜನ್ಮಕುಂಡಲಿಯಲ್ಲಿಯೇ ಏನೋ ಸಮಸ್ಯೆಗಳಿದೆಯೋ ಎಂದು ನನಗೆ ಅನಿಸುತ್ತದೆ. ರಾಮಾಯಣದಲ್ಲಿ ಬರುವ ಬಹಳಷ್ಟು ಘಟನೆಗಳಿಂದಲೂ ಇದು ಸ್ಪಷ್ಟವಾಗುತ್ತದೆ ಎಂದರು.