ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪಂಪ್ ವೆಲ್ ಫ್ಲೈಓವರ್ ಮಾಡಲು ಹತ್ತು ವರ್ಷ ಪ್ರಯತ್ನ ಪಟ್ಟಿರೋದು ನಾವು ಕಂಡಿದ್ದೇವೆ.
ಆದ್ದರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಯುಗಪುರುಷರಾದ ಕೋಟಿ-ಚೆನ್ನಯರ ಹೆಸರಿಡಲು ಇನ್ನೂ ಹತ್ತು ವರ್ಷಗಳ ಕಾಲ ಪ್ರಯತ್ನ ಪಡೋದು ಬೇಡ ಎಂಬ ಉದ್ದೇಶಕ್ಕೆ ನಾವು ಬೀದಿಗಿಳಿದಿದ್ದೇವೆ ಎಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ವ್ಯಂಗ್ಯವಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಅವರಲ್ಲಿ ಇಚ್ಛಾಶಕ್ತಿಯ ಕೊರತೆಯಿದೆ ಎಂದು ಎಲ್ಲರಿಗೂ ತಿಳಿದಿದೆ. ಪ್ರತೀ ಬಾರಿ ಮಂಗಳೂರು ವಿಮಾನ ನಿಲ್ದಾಣದಿಂದಲೇ ಬಂದಿಳಿಯುವ ಅವರ ಕಣ್ಣಿಗೆ ಅದಾನಿ ಹೆಸರು ಹಾಕಿರೋದು ಕಂಡಿಲ್ಲ ಎಂಬುದು ಅಚ್ಚರಿಯ ಸಂಗತಿ ಎಂದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರು ಇಡುವಲ್ಲಿ ಕಾಂಗ್ರೆಸ್ ಯಾವುದೇ ರೀತಿಯಲ್ಲಿ ರಾಜಕಾರಣ ಮಾಡುತ್ತಿಲ್ಲ. ಅಲ್ಲದೆ ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಾಡಿಯೇ ಕಾಂಗ್ರೆಸ್ ಪ್ರತಿಭಟನೆಯಿಂದ ವಿರಮಿಸುತ್ತದೆ. ಜಾತಿ ರಾಜಕಾರಣವನ್ನು ಬಿಜೆಪಿ ಮಾಡುತ್ತಿದ್ದು, ಹಾಗಾಗಿ ಅವರಿಗೆ ತಪ್ಪಿತಸ್ಥ ಮನೋಭಾವವಿದೆ. ಆದ್ದರಿಂದ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಹೆಸರಿಡಬೇಕೆಂಬ ಬೇಡಿಕೆಯನ್ನು ಕಾಂಗ್ರೆಸ್ ಪಕ್ಷ ಇಟ್ಟಿತ್ತು. ಮಳವೂರು ಗ್ರಾಪಂನಲ್ಲಿ ಅದರ ಬಗ್ಗೆ ನಿರ್ಣಯ ಕೈಗೊಂಡು ದ.ಕ.ಜಿಪಂಗೆ ಕಳುಹಿಸಿಕೊಡಲಾಗಿತ್ತು. ಜಿಪಂನಿಂದ ಆ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು.
ಇದೀಗ ರಾಜ್ಯ ಸರ್ಕಾರ ಈ ಬೇಡಿಕೆಯನ್ನು ಅಂಗೀಕರಿಸದೆ ದ.ಕ.ಜಿಲ್ಲಾಧಿಕಾರಿಯವರಿಗೆ ಸುತ್ತೋಲೆಯೊಂದನ್ನು ಕಳುಹಿಸಿದೆ. ಅದರಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಹಾಗೂ ಕಾರ್ಯಾಚರಣೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವ್ಯಾಪ್ತಿಗೆ ಬರುವುದರಿಂದ ಮರುನಾಮಕರಣವು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿಲ್ಲ ಎಂದು ತಿಳಿಸಿದೆ.
ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಅವರು ಈ ಬಗ್ಗೆ 8ವರ್ಷಗಳ ಹಿಂದೆಯೇ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ. ಇದಕ್ಕೆ ಅವರು ದಾಖಲೆ ನೀಡಲಿ. ಹಾಗೆಯೇ ಈ ಎಂಟು ವರ್ಷಗಳಲ್ಲಿ ಈ ಪ್ರಸ್ತಾವನೆ ಏನಾಗಿದೆ ಎಂಬುದಕ್ಕೆ ಕಾರಣ ನೀಡಲಿ. ಅದು ಮತ್ತೊಂದು ಪಂಪ್ ವೆಲ್ ಫ್ಲೈಓವರ್ ರೀತಿ ನನೆಗುದಿಗೆ ಬೀಳೋದು ಬೇಡ ಎಂದು ಹರೀಶ್ ಕುಮಾರ್ ಹೇಳಿದರು.