ಮಂಗಳೂರು: ಹಳೇ ದ್ವೇಷದ ಹಿನ್ನೆಲೆ ಯುವಕನ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಕಬಕ ಬಳಿಯ ಕಲ್ಲಂದಡ್ಕದಲ್ಲಿ ನಡೆದಿದೆ.
ಕಬಕ ಸಮೀಪದ ಕೊಡಿಪ್ಪಾಡಿ ಗ್ರಾಮ ಕಲ್ಲಂದಡ್ಕ ನಿವಾಸಿ ಖಾದರ್ ಎಂಬುವರ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಖಾದರ್ ಎದೆಗೆ ಗುಂಡು ತಗುಲಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ವರ್ಷ ತಂಡವೊಂದರ ಜೊತೆ ಖಾದರ್ ಗಲಾಟೆ ನಡೆಸಿದ್ದು, ಈ ಹಿನ್ನೆಲೆ ದ್ವೇಷ ತೀರಿಸಿಕೊಳ್ಳಲು ಗುಂಡಿನ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಖಾದರ್ ತನ್ನ ಮನೆಯಲ್ಲಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡದ ಸದಸ್ಯನೊಬ್ಬ ಮನೆಯ ಹೊರಗೆ ಕರೆದುಕೊಂಡು ಬಂದಿದ್ದಾನೆ. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರ ನೋಂದಣಿಯ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪುತ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.