ಪುತ್ತೂರು: ಕೇರಳದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 10ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಸಾಧನೆ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೇರಳ ಚುನಾವಣಾ ಉಸ್ತುವಾರಿಯಾಗಿ ಅತ್ಯಂತ ಸನಿಹದಿಂದ ಗಮನಿಸಿದ್ದು, ಈ ಬಾರಿ ಚುನಾವಣೆ ಕಳೆದ ಎಲ್ಲಾ ಚುನಾವಣೆಗಳಿಗಿಂತ ಭಿನ್ನವಾಗಲಿದೆ. ಈ ಬಾರಿ ಕೇರಳದ ಯುವಜನತೆ ಹಾಗೂ ಮಹಿಳೆಯರು ಬಿಜೆಪಿ ಪಕ್ಷದ ಪರವಾಗಿ ಒಲವು ತೋರಿಸುತ್ತಿದ್ದಾರೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಪಕ್ಷದ ಸೋಲಾರ್ ಹಗರಣನ್ನು ಬಯಲಿಗೆಳೆಯುವ ಮೂಲಕ ಚುನಾವಣೆಯಲ್ಲಿ ಎಲ್ಡಿಎಫ್ ಪಕ್ಷ ಉತ್ತಮ ಸಾಧನೆ ತೋರಿತ್ತು. ಯುಡಿಎಫ್ನ ಮುಖ್ಯಮಂತ್ರಿ ಉಮನ್ ಚಾಂಡಿ ಸೋಲಾರ್ ಹಗರಣದಲ್ಲಿ ಸಿಲುಕಿಕೊಂಡ ವಿಚಾರವನ್ನೇ ಮುಂದಿಟ್ಟುಕೊಂಡು ಎಲ್ಡಿಎಫ್ ಚುನಾವಣೆಯನ್ನು ಗೆದ್ದುಕೊಂಡಿತ್ತು. ಆದರೆ ಭ್ರಷ್ಟಾಚಾರವನ್ನು ಮಟ್ಟಹಾಕುತ್ತೇವೆ ಎಂದು ಅಧಿಕಾರಕ್ಕೆ ಬಂದು ನಿರಂತರ ಭ್ರಷ್ಟಾಚಾರದಲ್ಲೇ ತೊಡಗಿಸಿಕೊಂಡಿದೆ ಎಂದು ಆರೋಪಿಸಿದರು.
ಚಿನ್ನ ಕಳ್ಳ ಸಾಗಣೆಯದಲ್ಲಿ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಆರೋಪಿಗಳ ಜೊತೆ ಶಾಮೀಲಾಗಿರುವ ವಿಚಾರವೂ ಬೆಳಕಿಗೆ ಬಂದಿದೆ. ಅಲ್ಲದೆ ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರ ಶಬರಿಮಲೆಯಲ್ಲಿ ಹಿಂದೂಗಳ ಮೇಲೆ ಎಲ್ಡಿಎಫ್ ಸರ್ಕಾರ ನಡೆಸಿದ ದೌರ್ಜನ್ಯದಿಂದಲೂ ಹಿಂದೂಗಳು ಈ ಬಾರಿ ಎಲ್ಡಿಎಫ್ ತ್ಯಜಿಸಿ ಬಿಜೆಪಿ ಪರ ಒಲವು ಹೊಂದಿದ್ದಾರೆ. ಈ ಬಾರಿ ಕೇರಳದಲ್ಲಿ 6 ರಿಂದ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭೂತಪೂರ್ವ ಮುನ್ನಡೆ ಸಾಧಿಸಲಿದ್ದು, 10ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.
ಇದನ್ನೂ ಓದಿ.. ಸಿಡಿ ಪ್ರಕರಣ ಸಿಬಿಐ ತನಿಖೆಗೆ ಒತ್ತಾಯಿಸಿ ಪಿಐಎಲ್ : ಸರ್ಕಾರ, ಎಸ್ಐಟಿಗೆ ಹೈಕೋರ್ಟ್ ನೋಟಿಸ್