ಬೆಳ್ತಂಗಡಿ: ಹದಿನೈದು ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರ ಪಲ್ಕೆ ಜಲಪಾತದ ಸಮೀಪ ಗುಡ್ಡ ಕುಸಿದು ಸಂಭವಿಸಿದ ದುರಂತದ ಸಂದರ್ಭದಲ್ಲಿ ನಾಪತ್ತೆಯಾಗಿರುವ ಉಜಿರೆ ಸಮೀಪದ ಕಾಶಿಬೆಟ್ಟು ನಿವಾಸಿ ಸನತ್ ಶೆಟ್ಟಿ (20) ಎಂಬುವರ ಶೋಧಕ್ಕಾಗಿ ಮಂಗಳವಾರ ಕಾರ್ಯಾಚರಣೆ ಮುಂದುವರಿದಿದ್ದು, ಜೆಸಿಬಿ ಬಳಸಿ ಅಗೆತ ನಡೆಸಲಾಗಿದೆ.
ಜನವರಿ 25ರಂದು ಮಲವಂತಿಗೆ ಗ್ರಾಮದ ಎಳನೀರು ಸಮೀಪದ ಬಂಗಾರ್ ಪಲ್ಕೆ ಲಜಪಾತ ಬಳಿ ಗುಡ್ಡ ಕುಸಿತ ಉಂಟಾಗಿ ನಾಲ್ಕು ಜನರಲ್ಲಿ ಮೂರು ಮಂದಿ ಪಾರಾಗಿ ಉಜಿರೆ ಸಮೀಪದ ಕಾಶಿಬೆಟ್ಟು ನಿವಾಸಿ ಸನತ್ ಶೆಟ್ಟಿ ಎಂಬಾತ ಕಣ್ಮರೆಯಾಗಿದ್ದ. ಆತನ ಪೋಷಕರ ಕೋರಿಕೆಯ ಮೇರೆಗೆ ದೇಹ ಪತ್ತೆಗಾಗಿ ಕಳೆದ ಹದಿನೈದು ದಿನಗಳಿಂದ ಎಸ್ಡಿಆರ್ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಹಲವು ಸಂಘ ಸಂಸ್ಥೆಗಳು ಅವಿರತವಾಗಿ ಹುಡುಕುವ ಪ್ರಯತ್ನ ಪಡುತಿದ್ದರೂ ಯಾವುದೇ ಸುಳಿವು ಸಿಗದಿರುವುದು ಅತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಪಾಕ್ನಲ್ಲೇ 18 ವರ್ಷ ಜೈಲುವಾಸ: ಭಾರತಾಂಬೆ ಮಡಿಲಲ್ಲಿ ಪ್ರಾಣಬಿಟ್ಟ ವೃದ್ಧೆ!
ದುರಂತ ನಡೆದ ಸ್ಥಳಕ್ಕೆ ಯಾವುದೇ ಯಂತ್ರವಾಗಲಿ ಹೋಗದೆ ಇದ್ದರೂ ಸ್ವಯಂ ಸೇವಕರ ಹಾಗೂ ಅಧಿಕಾರಿಗಳ ಪ್ರಯತ್ನದಿಂದ ಕಾರ್ಯಾಚರಣೆ ನಡೆದಿತ್ತು. ಇತ್ತೀಚಿನ ಕೆಲ ದಿನಗಳಿಂದ ಜೆಸಿಬಿ ಮೂಲಕ ಕಾರ್ಯಚರಣೆ ನಡೆಸುತ್ತಿದ್ದರೂ ನಾಪತ್ತೆಯಾದ ವ್ಯಕ್ತಿಯ ದೇಹದ ಸುಳಿವು ನಿಗೂಢವಾಗಿಯೇ ಉಳಿದಿದೆ. ಇವತ್ತು ಸಿಗುತ್ತದೆ ನಾಳೆ ಸಿಗುತ್ತದೆ ಎಂಬ ದೊಡ್ಡ ಭರವಸೆಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲರಿಗೂ ನಿರಾಸೆಯಾಗುತ್ತಿದೆ.
ಇಂದಿನ ಕಾರ್ಯಚರಣೆಯಲ್ಲಿ ಈ ಪ್ರಕರಣದ ಸಂಪೂರ್ಣ ಚಿತ್ರಣ ಸಿಗಲಿದೆ ಎನ್ನಲಾಗುತ್ತಿದೆ. ಸನತ್ ಶೆಟ್ಟಿ ದೇಹದ ಸುಳಿವು ಸಿಗುವ ಮೂಲಕ ಎಲ್ಲಾ ಅನುಮಾನಗಳಿಗೆ, ಊಹಾಪೋಹಗಳಿಗೆ ತೆರೆ ಬೀಳಬೇಕಿದೆ.