ಸುಬ್ರಹ್ಮಣ್ಯ ( ದಕ್ಷಿಣ ಕನ್ನಡ) : ವಿಶ್ವ ಪ್ರಸಿದ್ಧ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾನುವಾರ ಬಿಸಿಸಿಐ ಕಾರ್ಯದರ್ಶಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಮತ್ತು ಕುಟುಂಬಸ್ಥರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ದೇವಳಕ್ಕೆ ಭೇಟಿ ನೀಡಿದ ಅವರು, ಶ್ರೀ ದೇವರಿಗೆ ಆಶ್ಲೇಷ ಬಲಿ ಸೇವೆ ಸಮರ್ಪಿಸಿದರು. ಈ ವೇಳೆ ಅವರ ಪತ್ನಿ ರಿಷಿತಾ ಶಾ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. ಶ್ರೀ ದೇವಳದ ಒಳಗೆ ಆರಂಭದಲ್ಲಿ ಸಂಕಲ್ಪ ನೆರವೇರಿಸಿ ಆಶ್ಲೇಷ ಬಲಿ ಸೇವೆ ಸಮರ್ಪಿಸಿದರು. ಬಳಿಕ ಆಶ್ಲೇಷ ಬಲಿ ಪ್ರಸಾದ ಸ್ವೀಕರಿಸಿದರು. ಶ್ರೀ ದೇವಳದ ಅರ್ಚಕ ಸತ್ಯನಾರಾಯಣ ನೂರಿತ್ತಾಯರು ಜಯ್ ಶಾ ಅವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು.
![ಕುಕ್ಕೆ ದೇವಳದಲ್ಲಿ ಅಮಿತ್ ಶಾ ಪುತ್ರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ](https://etvbharatimages.akamaized.net/etvbharat/prod-images/30-07-2023/kn-dk-01-amithshahsonvisit-brk-vis-kac10008_30072023161710_3007f_1690714030_916.jpg)
ಬಳಿಕ ಹೊಸಳಿಗಮ್ಮನ ದರ್ಶನ ಪಡೆದ ಅವರು ಪೂಜೆ ಸಲ್ಲಿಸಿದರು. ಬಳಿಕ ಶ್ರೀ ದೇವಳದಲ್ಲಿ ಶಾ ಕುಟುಂಬಸ್ಥರು ಪ್ರಸಾದ ಭೋಜನ ಸ್ವೀಕರಿಸಿದರು. ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರಿನಲ್ಲಿ ಶ್ರೀ ದೇವಳದಲ್ಲಿ ನಡೆಯುವ ನಿತ್ಯ ಅನ್ನ ದಾಸೋಹಕ್ಕೆ ದೇಣಿಗೆ ನೀಡಿ ಪ್ರಸಾದ ಸ್ವೀಕರಿಸಿದರು.
ಶ್ರೀ ದೇವರ ದರ್ಶನದಿಂದ ಅತೀವ ಸಂತಸ- ಜಯ್ ಶಾ: ದೇಶ-ವಿದೇಶಗಳಲ್ಲಿ ಪ್ರಖ್ಯಾತಿ ಪಡೆದ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಶ್ರೀ ದೇವರ ದರ್ಶನ ಪಡೆದುದು ಅತೀವ ಸಂತಸ ತಂದಿದೆ. ನನಗೆ ಶ್ರೀ ದೇವರ ದರ್ಶನ ಮಾಡಿಸಿ ಸೇವೆ ನೆರವೇರಿಸಲು ಉತ್ತಮವಾದ ವ್ಯವಸ್ಥೆ ಕಲ್ಪಿಸಿಕೊಟ್ಟ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ, ಸದಸ್ಯರಿಗೆ ಮತ್ತು ದೇವಳದ ಆಡಳಿತ ಮಂಡಳಿಗೆ ತುಂಬು ಹೃದಯದ ಧನ್ಯವಾದಗಳು. ಮುಂದೆ ಅನೇಕ ಬಾರಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆಯುವ ಕನಸು ಹೊಂದಿದ್ದೇನೆ. ಇದನ್ನು ಶ್ರೀ ದೇವರು ನೆರವೇರಿಸುತ್ತಾರೆ ಎಂಬ ನಂಬಿಕೆ ನನ್ನದು ಎಂದು ಶ್ರೀ ದೇವಳದ ಬಗ್ಗೆ ಜಯ್ ಶಾ ಅವರು ಹೇಳಿದ್ದಾರೆ.
ಬಳಿಕ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಚೇರಿಗೆ ಭೇಟಿ ನೀಡಿದ ಜಯ್ ಶಾ ಅವರನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮತ್ತು ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ ಮಡ್ತಿಲ ಜತೆಗಿದ್ದರು.
ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮತ್ತು ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್. ಎಸ್ ಹಾಗೂ ಮನೋಜ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್. ಟಿ ಮತ್ತು ಸಿಬ್ಬಂದಿ ಸೂಕ್ತ ಬಂದೋಬಸ್ತ್ ಮಾಡಿದ್ದರು.
ಇದನ್ನೂ ಓದಿ: ಕುಕ್ಕೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಿರ್ಲಾ ಗ್ರೂಪ್ ಕುಟುಂಬ