ಬೆಳ್ತಂಗಡಿ(ದಕ್ಷಿಣ ಕನ್ನಡ): ಮದುವೆಯಾಗಲು ಪ್ರೀತಿಸಿದ ಯುವತಿ ಮನೆ ಬಿಟ್ಟು ಬರಲಿಲ್ಲ ಎಂಬ ಕಾರಣಕ್ಕೆ ಪ್ರಿಯಕರ ತನ್ನ ಲವರ್ಗೆ ಚೂರಿಯಿಂದ ಇರಿದ ಘಟನೆ ಲಾಯ್ಲ ಗ್ರಾಮದ ಪುತ್ರಬೈಲು ಎಂಬಲ್ಲಿ ನಡೆದಿದೆ.
ಪುಂಜಾಲಕಟ್ಟೆ ಸಮೀಪದ ಶಮೀರ್ ಎಂಬ ಯುವಕ ಪುತ್ರಬೈಲು ನಿವಾಸಿಯಾದ ಯುವತಿಯನ್ನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದ. ಏಪ್ರಿಲ್ 06 ರಂದು ರಾತ್ರಿ ತನ್ನ ಲವರ್ ಮನೆಗೆ ತೆರಳಿದ್ದ ಶಮೀರ್ ಮದುವೆಯಾಗಲು ಮನೆ ಬಿಟ್ಟು ಬರಬೇಕು ಎಂದು ಆಕೆಗೆ ಒತ್ತಾಯಿಸಿದ್ದಾನೆ. ಆದ್ರೆ ಯುವತಿ ಮನೆ ಬಿಟ್ಟು ಬರಲು ನಿರಾಕರಿಸಿದ್ದಾಳೆ.
ಮನೆ ಬಿಟ್ಟು ಯುವತಿ ಬರದೇ ಇದ್ದಾಗ ಶಮೀರ್ ಕೋಪದಲ್ಲಿ ಆಕೆಯ ಮನೆಗೆ ನುಗ್ಗಿದ್ದಾನೆ. ಬಳಿಕ ಅವಳಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಪೋಷಕರು ಕೂಡಲೇ ಆಕೆಯನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿದರು. ಯುವತಿಗೆ ಚಿಕಿತ್ಸೆ ಮುಂದುವರಿದಿದೆ.
ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನನ್ವಯ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.