ಚಿತ್ರದುರ್ಗ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಖಾಸಗಿ ಬಸ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮೂವರು ಮಕ್ಕಳು ಸೇರಿ ಒಟ್ಟು ಐವರು ಸಾವನಪ್ಪಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಗೇಟ್ನ ರಾಷ್ಟ್ರೀಯ ಹೆದ್ದಾರಿ 4ರ ಬಳಿ ನಡೆದಿದೆ.
ಬೆಳಗ್ಗೆ 3 ಗಂಟೆಗೆ ಈ ಅವಘಢ ಸಂಭವಿಸಿದೆ ಎಂದು ಪೋಲಿಸರು ಅಂದಾಜಿಸಿದ್ದಾರೆ. ಕೆಎ 51 ಎಡಿ 7449 ನೋಂದಣಿಯ ಕುಕ್ಕೆ ಶ್ರೀ ಎಂಬ ಖಾಸಗಿ ಬಸ್ ವಿಜಯಪುರದಿಂದ ಬೆಂಗಳೂರಿಗೆ ಸಂಚರಿಸುವ ವೇಳೆ ಶಾರ್ಟ್ ಸರ್ಕ್ಯೂಟ್ ಹಾಗೂ ಚಾಲಕನ ಅಜಾಗರೂಕತೆಯಿಂದ ಈ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ವಿಜಯಪುರ ಮೂಲದ ಶೀಲಾ (33), ಸ್ಪರ್ಷಾ(08), ಸಮೃದ್ಧ(05), ಕವಿತಾ (29), ನಿಶ್ಚಿತಾ(03) ಬೆಂಕಿಯ ಕೆನ್ನಾಲಿಗೆಗೆ ಬೆಂದು ಪ್ರಾಣ ಬಿಟ್ಟಿದ್ದಾರೆ.
ಗಾಯಳುಗಳನ್ನು ಹಿರಿಯೂರು ಹಾಗೂ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಘಟನೆ ಚಾಲಕನ ಅಜಾಗರೂಕತೆಯಿಂದ ನಡೆದಿದ್ದು, ರಾತ್ರಿ 9 ಗಂಟೆಗೆ ವಿಜಯಪುರದಿಂದ ಎಲ್ಲೂ ನಿಲ್ಲಿಸದೆ ತಡೆ ರಹಿತವಾಗಿ ಬಸ್ ಚಾಲಕ ಚಾಲನೆ ಮಾಡಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ. ಪ್ರಯಾಣಿಕರು ಕೂಗಿಕೊಂಡರು ಬಸ್ ನಿಲ್ಲಿಸದ ಚಾಲಕ ಬೆಂಕಿ ಹೊತ್ತಿಕೊಂಡಾಗ ಬಸ್ನಿಂದ ಹಾರಿ ಕಾಲ್ಕಿತ್ತಿದ್ದಾನೆ.
ಬೆಂಕಿಯನ್ನು ಕಂಡ ಪ್ರಯಾಣಿಕರು ಕೆಲವರು ಬಸ್ ಕಿಟಕಿ ಗ್ಲಾಸ್ ಒಡೆದು ಹೊರ ಬಂದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನೂ ಐವರು ಹೊರ ಬಾರಲಾಗದೆ ಬೆಂಕಿಯಲ್ಲಿ ಆಹುತಿಯಾಗಿದ್ದಾರೆ. ಒಟ್ಟು 32 ಜನರನ್ನು ಹೊತ್ತು ರಾತ್ರಿ 9 ಗಂಟೆಗೆ ವಿಜಯಪುರ ಬಿಟ್ಟಿದ್ದ ಕುಕ್ಕೆ ಶ್ರೀ ಖಾಸಗಿ ಟ್ರಾವೆಲ್ಸ್ ಬಸ್ ಇದೀಗ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ. ಮಾಹಿತಿ ತಿಳಿದ ಎಸ್ಪಿ ಜಿ.ರಾಧಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದು, ಘಟನೆ ಹಿರಿಯೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.