ಚಿತ್ರದುರ್ಗ: ದೇಶದಲ್ಲಿ ತಳ ಸಮುದಾಯಕ್ಕೆ ಹರಡಿ ಆತಂಕಕ್ಕೀಡು ಮಾಡಿದ್ದ ಕೊರೊನಾವನ್ನು ಕಟ್ಟಿಹಾಕುವಲ್ಲಿ ಕೊರೊನಾ ವಾರಿಯರ್ಸ್ ಯಶಸ್ವಿಯಾಗಿದ್ದಾರೆ. ಏಳೆಂಟು ತಿಂಗಳ ಹಿಂದೆ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆದಿದ್ದ ಕೊರೊನಾ ಇದೀಗ ಇಳಿಮುಖ ಕಾಣುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಗಗನಕ್ಕೇರಿದ್ದ ಕೊರೊನಾ ಸೋಂಕಿತರ ಸಂಖ್ಯೆಯನ್ನು ತಡೆಯುವಲ್ಲಿ ಚಿತ್ರದುರ್ಗದ ವೈದ್ಯರ ಪಾತ್ರ ಪ್ರಮುಖವಾಗಿದೆ.
ಕೊರೊನಾ ಮಹಾಮಾರಿ ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿತ್ತು. ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದು ಕೊರೊನಾ ತಡೆಗಟ್ಟಲು ವೈದ್ಯರಿಗೆ ಜನರು ಕೂಡ ಸಾಥ್ ನೀಡಿದ್ದರು. ಸಮುದಾಯಕ್ಕೆ ಹರಡಿದ್ದ ಕೊರೊನಾವನ್ನು ಮಟ್ಟಹಾಕಲು ವೈದ್ಯರು ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆ ನಡೆಸಿ "ಶೀಘ್ರ ಪತ್ತೆ ಶೀಘ್ರ ಚಿಕಿತ್ಸೆ ನೀಡಿ" ಕೊರೊನಾ ಸಂಖ್ಯೆ ಇಳಿಮುಖವಾಗಲು ಪ್ರಮುಖ ಕಾರಣವಾಗಿದೆಯಂತೆ.
ಜಿಲ್ಲೆಯ ವೈದ್ಯರು ರಾಜ್ಯಮಟ್ಟದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೊರೊನಾ ವಿರುದ್ಧ ಹೋರಾಡಿ ಒಂದು ದಿನಕ್ಕೆ 1,900 ಕೋವಿಡ್ ಪರೀಕ್ಷೆ ಮಾಡುವ ಮೂಲಕ ಪಾಸಿಟಿವ್ ಪ್ರಕರಣಗಳನ್ನು ಪತ್ತೆ ಹಚ್ಚಿ ಶೀಘ್ರ ಚಿಕಿತ್ಸೆ ನೀಡಿ ಕೊರೊನಾ ಪ್ರಕರಣಗಳು ಇಳಿಮುಖ ಆಗುವಂತೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,12,020 ಜನರಿಗೆ ಕೊರೊನಾ ತಪಾಸಣೆ ಮಾಡುವ ಮುಖೇನ ಕೊರೊನಾ ಪತ್ತೆ ಹಚ್ಚುವುದರಿಂದ ಪ್ರತಿ ದಿನ 500ರ ಬದಲಿಗೆ ಕೇವಲ 30ರಿಂದ 40 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಪ್ರಸ್ತುತವಾಗಿ ಜಿಲ್ಲೆಯಲ್ಲಿ ಒಟ್ಟು 12,466 ಪ್ರಕರಣಗಳ ಪೈಕಿ (ಕಳೆದ ದಿನದ ವರದಿ ಪ್ರಕಾರ) 11,931 ಜನ ಕೊರೊನಾದಿಂದ ಗುಣಮುಖರಾಗಿದ್ದು, ಇನ್ನೂ 475 ಸಕ್ರಿಯ ಪ್ರಕರಣಗಳಿವೆ. ಕೊರೊನಾ 60 ಜನರನ್ನು ಬಲಿ ಪಡೆದಿದ್ದು, ಕೊರೊನಾ ಕಟ್ಟಿಹಾಕಲು ಜಿಲ್ಲೆಯ ವೈದ್ಯರು ಹಗಲಿರಳು ಕಾರ್ಯನಿರ್ವಹಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಜನರು ಕೊರೊನಾಕ್ಕೆ ಭಯಭೀತರಾಗಿ ಹೈರಾಣಾಗಿದ್ದ ವೇಳೆ ವೈದ್ಯರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹಗಲು ಇರುಳು ಎನ್ನದೆ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಪರಿಣಾಮ ಜಿಲ್ಲೆಯಲ್ಲಿ ಕೊರೊನಾ ಇಳಿಮುಖ ಆಗಲು ಪ್ರಮುಖ ಕಾರಣ ಎಂದು ಜನಸಾಮಾನ್ಯರು ಹೇಳುತ್ತಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ 60 ಜನರನ್ನು ಬಲಿ ಪಡೆದು ಭಯದ ವಾತಾವರಣ ನಿರ್ಮಾಣ ಮಾಡಿದ್ದ ಕೊರೊನಾ ಮಹಾಮಾರಿಯನ್ನು ವೈದ್ಯರು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.