ಚಿತ್ರದುರ್ಗ : ಬೀದಿಗಳಲ್ಲಿ ನಾಯಿ ಕಂಡರೆ ಕಲ್ಲು ಹೊಡೆಯುವ ಜನಗಳೇ ಹೆಚ್ಚು. ಅದರಲ್ಲೂ ಬೀದಿನಾಯಿಗಳು ಕಂಡ್ರೆ ಎಷ್ಟೋ ಜನ ಮೂಗು ಮುರಿಯುತ್ತಾರೆ. ಇಂತಹ ಸನ್ನಿವೇಶಗಳಲ್ಲಿ ಇಲ್ಲೊಬ್ಬ ಮಹಿಳೆ ನಿತ್ಯವೂ ಬೀದಿ ನಾಯಿಗಳ ಹೊಟ್ಟೆ ತುಂಬಿಸುವ ಮೂಲಕ ಮಾನವೀಯ ಕಾರ್ಯದಲ್ಲಿ ತೊಡಗಿದ್ದಾರೆ.
ಬೀದಿಗಳಲ್ಲಿ ವಾಸಮಾಡುವ ನಾಯಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತವೆ. ಸ್ವಲ್ಪ ಯಾಮಾರಿದ್ರೂ ವಾಹನಗಳಿಗೆ ಸಿಕ್ಕು ತಮ್ಮ ಪ್ರಾಣ ಕೂಡ ಕಳೆದುಕೊಳ್ಳುತ್ತವೆ. ಇವೆಲ್ಲವುಗಳನ್ನು ಮನಗಂಡ ಕೋಟೆನಾಡಿನ ವಿಶ್ವೇಶ್ವರಯ್ಯ ಬಡಾವಣೆಯ ಪದ್ಮಾವತಿ ಎಂಬುವರು ನಿತ್ಯವೂ 70ಕ್ಕೂ ಅಧಿಕ ಶ್ವಾನಗಳಿಗೆ ಅನ್ನ ನೀಡುವ ಅನ್ನದಾತೆಯಾಗಿದ್ದಾರೆ.
ಪ್ರತಿದಿನ ದ್ವಿಚಕ್ರ ವಾಹನದ ಮೂಲಕ ಬೀದಿ ಬೀದಿ ಸಂಚರಿಸಿ ನಾಯಿಗಳಿದ್ದ ಸ್ಥಳಕ್ಕೆ ತೆರಳಿ ಬ್ರೆಡ್,ಹಾಲು, ಬಿಸ್ಕೆಟ್, ಅನ್ನ ಮುಂತಾದ ಆಹಾರ ನೀಡುವ ಮೂಲಕ ಮೂಕಪ್ರಾಣಿಗಳ ಹೊಟ್ಟೆ ತುಂಬಿಸುತ್ತಾರೆ. ಅಷ್ಟೇ ಅಲ್ಲ, ನಾಯಿಗಳು ಅನಾರೋಗ್ಯಕ್ಕೆ ತುತ್ತಾದ್ರೆ ಅವುಗಳಿಗೆ ಆರೋಗ್ಯೋಪಚಾರವನ್ನು ಸಹ ಪದ್ಮಾವತಿ ಮಾಡುತ್ತಾರೆ.
![Chitradurga resident Padmavati serving food to Street dogs](https://etvbharatimages.akamaized.net/etvbharat/prod-images/kn-ctd-01-dogs-premi-spl-pkg-ka10027_19122020104842_1912f_00387_186.jpg)
ಸಾರ್ವಜನಿಕರಿಂದ ಶ್ಲಾಘನೆ : ಪದ್ಮಾವತಿಯವರು ಬೀದಿ ನಾಯಿಗಳ ಮೇಲೆ ತೋರಿಸುತ್ತಿರುವ ಪ್ರೀತಿ ಕಂಡು ನಗರ ನಿವಾಸಿಗಳು ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರು ಚಿಕ್ಕವರಾಗಿದ್ದಾಗ ಇವರಮ್ಮ ಮನೆಯಲ್ಲಿ ಬೀದಿ ನಾಯಿ ಸಾಕಿಕೊಂಡಿದ್ದರಂತೆ, ಅಲ್ಲಿಂದ ಆರಂಭವಾದ ಬೀದಿನಾಯಿಗಳ ಮೇಲಿನ ಪ್ರೀತಿ ಹಾಗೆ ಮುಂದುವರೆದಿದ್ದು, ಪ್ರತಿದಿನ 80ಕ್ಕೂ ಅಧಿಕ ಶ್ವಾನಗಳ ಹೊಟ್ಟೆ ತುಂಬಿಸುವರೆಗೂ ನಡೆದಿದೆ.
ಸ್ಕೂಟಿ ಶಬ್ದ ಕೇಳಿದ ಕೂಡಲೇ ಶ್ವಾನಗಳು ಊಟಕ್ಕೆ ಹಾಜರ್ : ಕಳೆದ ಐದಾರು ವರ್ಷಗಳಿಂದ ಪದ್ಮಾವತಿ ಬೀದಿ ನಾಯಿಗಳಿಗೆ ತಿಂಡಿ, ಊಟ ನೀಡುತ್ತಾ ಬಂದಿದ್ದು, ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಮನೆಯಲ್ಲಿ ತಯಾರಿಸಿದ ಆಹಾರದ ಜೊತೆಗೆ ಬೇಕರಿ ಖಾದ್ಯಗಳನ್ನು ನಾಯಿಗಳಿಗೆ ತಿನ್ನಿಸುತ್ತಾರೆ. ಹೀಗಾಗಿ ಇವರ ಸ್ಕೂಟರ್ ಹಾರ್ನ್ ಕೇಳಿದ ಕೂಡಲೇ ನಾಯಿಗಳು ಇವರ ಬಳಿ ಓಡಿ ಬಂದು ಪ್ರೀತಿ ತೋರಿಸುತ್ತವೆ.
![Chitradurga resident Padmavati serving food to Street dogs](https://etvbharatimages.akamaized.net/etvbharat/prod-images/9931585_thmjpg.jpg)
ಓದಿ: ಸಿದ್ದರಾಮಯ್ಯನವರೇ, ಪ್ರಾದೇಶಿಕ ಪಕ್ಷ ಕಟ್ಟಿ10 ಸ್ಥಾನ ಗೆದ್ದು ತೋರಿಸಿ: ಹೆಚ್ಡಿಕೆ ಸವಾಲು
ತಾಯಿಯ ಕಾರ್ಯಕ್ಕೆ ಮಗಳು ಸಾಥ್ : ನಿತ್ಯ ಬೀದಿನಾಯಿಗಳ ಹೊಟ್ಟೆ ತುಂಬಿಸುವ ಕಾರ್ಯಕ್ಕೆ ಪದ್ಮಾವತಿ ಅವರ ಮಗಳು ಕೈ ಜೋಡಿಸಿದ್ದಾರೆ. ಊಟ ನೀಡಲು ತಾಯಿ ಜೊತೆಗೆ ತೆರಳಿ ಶ್ವಾನಗಳಿಗೆ ಊಟ ಬಡಿಸಿ ಅವರ ಸಹಾಯಕ್ಕೆ ಮುಂದಾಗಿದ್ದಾರೆ.
![dog eating food](https://etvbharatimages.akamaized.net/etvbharat/prod-images/9931585_thumjpg.jpg)
ನಾಯಿಮರಿ ಸಾಕಲು ಜಾಗೃತಿ : ಪದ್ಮಾವತಿಯವರು ನಗರ ಪ್ರದೇಶಗಳಲ್ಲಿರುವ ಬೀದಿನಾಯಿಗಳ ಮರಿಗಳನ್ನು ಆಟೋಗಳ ಮೂಲಕ ಹಳ್ಳಿಯ ಜನರಿಗೆ ಸಾಕಲು ನೀಡುತ್ತಾರಂತೆ. ಬೀದಿಗಳಲ್ಲಿ ವಾಸ ಮಾಡುವ ನಾಯಿಗಳಿಗೆ ಯಾರು ತೊಂದರೆ ಮಾಡಬಾರದು. ಅವುಗಳನ್ನು ನಾವು ಪ್ರೀತಿಯಿಂದ ಕಂಡಿದ್ರೆ, ಅವು ಸದಾಕಾಲ ನಮಗೆ ಪ್ರೀತಿ ತೋರಿಸುತ್ತವೆ ಎನ್ನುತ್ತಾರೆ ಶ್ವಾನ ಪ್ರೇಮಿ ಪದ್ಮಾವತಿ.