ಚಿತ್ರದುರ್ಗ: ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯ ಸೇವೆ ಇಲಾಖೆಯು ಜಿಲ್ಲೆಯ ಆಸಕ್ತ ರೈತರಿಗೆ ಒಟ್ಟು 17.22 ಲಕ್ಷ ರೂ. ನೆರವು ನೀಡಲಾಗುವುದೆಂದು ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಕೃಷ್ಣಪ್ಪ ತಿಳಿಸಿದ್ದಾರೆ.
ಜಲ ಕೃಷಿ ವಿಧಾನದಡಿ ಹಸಿರು ಮೇವು ಉತ್ಪಾದಿಸಲು ಪಶುಪಾಲನಾ ಮತ್ತು ಪಶುವೈದ್ಯ ಸೇವೆ ಇಲಾಖೆ ಅಗತ್ಯ ನೆರವು ನೀಡುತ್ತಿದ್ದು, ಜಿಲ್ಲೆಯ 30 ರೈತರು ಈ ನೆರವು ಪಡೆಯಬಹುದೆಂದು ತಿಳಿಸಿದರು. ಜಿಲ್ಲೆಯಲ್ಲಿ ಅತ್ಯಂತ ಸುಲಭವಾಗಿ ಕಡಿಮೆ ಸ್ಥಳಾವಕಾಶದಲ್ಲಿ ಜಲ ಕೃಷಿ ಮೂಲಕ ಹಸಿರು ಮೇವು ಪಡೆಯುವಂತೆ ಮಾಡುವ ಈ ವಿಧಾನ ಜನಪ್ರಿಯಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಪಶುಸಂಗೋಪನೆ ಇಲಾಖೆಯು ಕಳೆದೆರಡು ವರ್ಷಗಳಲ್ಲಿ ಒಟ್ಟು 30 ರೈತರಿಗೆ 17.22 ಲಕ್ಷ ರೂ. ನೆರವು ಒದಗಿಸಿದೆ ಎಂದು ಹೇಳಿದರು.

ಜಲ ಕೃಷಿ ಯೋಜನೆಯಡಿ ಮೇವು ಪಡೆಯಲು ಪ್ರತಿ ಘಟಕಕ್ಕೆ 57,400 ರೂ. ವೆಚ್ಚ ನಿಗದಿಪಡಿಸಿದೆ. ಇಲಾಖೆಯು ಸಾಮಾನ್ಯ ವರ್ಗದ ರೈತರಿಗೆ 51,660 ರೂ. ಸಹಾಯಧನ ನೀಡಿದರೆ ರೈತನ ವಂತಿಕೆ ರೂ. 5,740. ಪ.ಜಾತಿ ಮತ್ತು ಪ.ವರ್ಗದ ರೈತರಿಗೆ ರೂ. 56,400 ಸಹಾಯಧನ ನೀಡಲಾಗುತ್ತದೆ. 2018-19 ರಲ್ಲಿ ಒಟ್ಟು 17 ರೈತರಿಗೆ ಇಲಾಖೆ ನೆರವು ನೀಡಿದ್ದರೆ, ಪ್ರಸಕ್ತ ವರ್ಷದಲ್ಲಿ 13 ರೈತರಿಗೆ ನೆರವು ಒದಗಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.