ಚಿಕ್ಕಮಗಳೂರು: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಿಎಎ ವಿರುದ್ಧ ನಡೆಯುತ್ತಿದ್ದ ಹೋರಾಟದಲ್ಲಿ ಜಿಲ್ಲೆಯ ಕೊಪ್ಪ ತಾಲೂಕಿನ ಯುವತಿ ಅಮೂಲ್ಯ ಲಿಯೋನ್ 'ಪಾಕಿಸ್ತಾನ ಜಿಂದಾಬಾದ್' ಎಂದೂ ಘೋಷಣೆ ಕೂಗಿರೋದಕ್ಕೆ ಆಕೆಯ ವಿರುದ್ಧ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರೋದು ದೊಡ್ಡ ತಪ್ಪು. ಅವಳನ್ನು ಜೈಲಿಗೆ ಕಳುಹಿಸಬೇಕು. ಮೋದಿ ವಿರುದ್ದ ಮಾತನಾಡಿದಾಗಲೂ ಅವಳಿಗೆ ಪೋನ್ ಮಾಡಿ ಬುದ್ದಿ ಮಾತು ಹೇಳಿದ್ದೇನೆ. ನೀನು ಈ ರೀತಿಯಾಗಿ ಮಾತನಾಡೋದು ತಪ್ಪು ಎಂದು ನಾಲ್ಕು ದಿನದ ಹಿಂದೆ ಹೇಳಿದ್ದೆ ಎಂದು ತಂದೆ ವಾಜಿ ಹೇಳಿದರು.
ಪೊಲೀಸರು ಆಕೆಯ ಕೈ ಕಾಲು ಮುರಿದು ಪಾಠ ಕಲಿಸಬೇಕು. ನಾನು ಮಗಳು ಮಾಡಿರುವ ತಪ್ಪನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ನಾನು ಭಾರತ್ ಮಾತಕೀ ಜೈ ಎಂದೂ ಹೇಳುತ್ತೇನೆ. ಅವಳು ಮನೆಗೆ ಬಂದರೂ ಸೇರಿಸೋದಿಲ್ಲ. ಸದ್ಯ ಅವಳು ಜೈಲಿನಲ್ಲಿ ಇರಲಿ ಎಂದು ಕಿಡಿಕಾರಿದರು.
ನನಗವಳು ಒಬ್ಬಳೇ ಮಗಳು. ಆಕೆಯ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಿ. ನಾನು ವಕೀಲರನ್ನು ಇಡೋದಿಲ್ಲ. ಆಕೆಗೆ ಜಾಮೀನು ನೀಡೋದಿಲ್ಲ. ಅಮೂಲ್ಯ ನನ್ನ ಕುಟುಂಬದ ಸದಸ್ಯರಿಗೆ ತುಂಬಾ ನೋವು ನೀಡಿದ್ದಾಳೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಶಿವಪುರ ಗ್ರಾಮದಲ್ಲಿರುವ ತಂದೆ, ತನ್ನ ಮಗಳು ಮಾಡಿರುವ ತಪ್ಪಿಗೆ ಆಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.