ರಾಯಚೂರು/ಚಿಕ್ಕಮಗಳೂರು: ನಾಳೆ ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಕೆಲ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಆದರೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ದೇವಸೂಗೂರಿನ ಸೂಗೂರೇಶ್ವರ ದೇವಾಲಯ, ಶೃಂಗೇರಿ ಶಾರದಾಂಬೆ ದರ್ಶನಕ್ಕೆ ಎಂದಿನಂತೆ ಅವಕಾಶವಿದೆ.
ಮಂತ್ರಾಲಯದಲ್ಲಿ ರಾಯರ ಮೂಲ ಬೃಂದಾವನಕ್ಕೆ ದರ್ಶನಕ್ಕೆ ಬರುವಂತಹ ಭಕ್ತರಿಗೆ ಎಂದಿನಂತೆ ಅವಕಾಶವಿದ್ದು, ವಿಶೇಷ ಸೇವೆ, ಪೂಜೆ-ಪುನಸ್ಕಾರಗಳನ್ನ ಗ್ರಹಣ ಮುಗಿದ ಬಳಿಕ ನೆರವೇರಿಸಲು ಅವಕಾವಿದೆ. ಅಲ್ಲದೇ ರಾಯರಿಗೆ ಶ್ರೀಮಠದಲ್ಲಿ ಬೆಳಿಗ್ಗೆ ನಡೆಯುವ ಪೂಜೆಗಳು ಸಹ ಗ್ರಹಣ ಮುಗಿದ ಬಳಿಕ ನಡೆಯಲಿವೆ. ಗ್ರಹಣದ ಸಮಯದಲ್ಲಿ ಜಪ, ತಪಗಳು ನಡೆಯಲಿದ್ದು, ಗ್ರಹಣ ಬಳಿಕ ಹೋಮ, ಹವನಗಳನ್ನು ನಡೆಸಲಾಗುವುದು. ಸಂಜೆ ಕಾರ್ಯಕ್ರಮಗಳು ಕೂಡಾ ಎಂದಿನಂತೆ ಜರುಗಿಲಿವೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
ದೇವಸೂಗೂರಿನ ಸೂಗೂರೇಶ್ವರ ದೇವಾಲಯದಲ್ಲಿ ಎಂದಿನಂತೆ ಗ್ರಹಣ ವೇಳೆಯಲ್ಲಿ ದರ್ಶನಕ್ಕೆ ಮುಕ್ತ ಅವಕಾಶವಿದೆ. ಶ್ರೀ ಸೂಗೂರೇಶ್ವರ ಸ್ವಾಮಿಗೆ ನಿತ್ಯ ನಡೆಯುವಂತಹ ಬೆಳಗಿನ ಪೂಜೆಗಳು ಗ್ರಹಣದ ಬಳಿಕ ನೆರವೇರಲಿದ್ದು, ಸಂಜೆಯ ಕಾರ್ಯಕ್ರಮಗಳು, ಪೂಜೆಗಳು ಯಥಾವತ್ತಾಗಿ ಜರುಗಲಿವೆ ಎಂದು ದೇವಾಲಯದ ಆರ್ಚಕರು ತಿಳಿಸಿದ್ದಾರೆ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಶೃಂಗೇರಿ ದೇವಸ್ಥಾನದಲ್ಲಿ ಗ್ರಹಣದ ನಂತರ ಪೂಜೆಯ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ಇಂದು ರಾತ್ರಿ ಭಕ್ತರಿಗೆ ಶೃಂಗೇರಿಯ ಶಾರದ ಮಠದಲ್ಲಿ ಊಟದ ಸೌಲಭ್ಯ ಇರಲಿಲ್ಲ ಎನ್ನಲಾಗಿದೆ. ನಾಳೆ ಮಧ್ಯಾಹ್ನ ಎಂದಿನಂತೆ ಊಟದ ವ್ಯವಸ್ಥೆ ಮುಂದುವರೆಯಲಿದೆ.
ಇನ್ನು ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಬೆಳಗ್ಗೆ ಎಂಟು ಗಂಟೆಯಿಂದ 11 ಗಂಟೆವರೆಗೆ ದೇವರಿಗೆ ನಿರಂತರ ಅಭಿಷೇಕ ನಡೆಯಲಿದ್ದು, 12.30 ವಿಶೇಷ ಪೂಜೆ ಪ್ರಾರಂಭವಾಗಲಿದೆ. ಜಿಲ್ಲೆಯ ಎರಡೂ ದೇವಾಲಗಳಿಗೂ ಮುಂಜಾನೆಯಿಂದಲೇ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದು, ನಾಳೆ ಗ್ರಹಣ ಮುಗಿದ ನಂತರ ದೇವರಿಗೆ ವಿಶೇಷ ಪೂಜೆಯನ್ನು ನೆರೆವೇರಿಸುವುದರ ಮೂಲಕ ತಮ್ಮ ತಮ್ಮ ಸ್ಥಳಗಳಿಗೆ ವಾಪಸ್ ತೆರಳಲಿದ್ದಾರೆ.