ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಬಸರಿಕಟ್ಟೆಯ ಯುವಕ ಪ್ರೇಮ ವೈಫಲ್ಯದಿಂದ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕನನ್ನು ಸತೀಶ್ ಎಂದು ಗುರುತಿಸಲಾಗಿದೆ.
ಈತ ಹಾಗೂ ಮೂಡಿಗೆರೆ ತಾಲೂಕಿನ ಹಿರೈಬೈಲಿನ ಯುವತಿ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಇವರ ಪ್ರೇಮದಲ್ಲಿ ಬಿರುಕು ಕಾಣಿಸಿಕೊಂಡಿತ್ತು ಎನ್ನಲಾಗಿದೆ.
ಆ ಯುವತಿಯನ್ನು ಈತನೇ ನರ್ಸಿಂಗ್ ಓದಿಸಿದ್ದು ಆಕೆಗೆ ಕೆಲಸವೂ ಸಿಕ್ಕಿತ್ತು. ಇದಾದ ಬಳಿಕ ಆಕೆ ಸತೀಶ್ಗೆ ಸರ್ಕಾರಿ ಕೆಲಸ ಪಡೆಯುವಂತೆ ಹೇಳುತ್ತಿದ್ದಳು. ಆದರೆ ಕಡಿಮೆ ಓದಿದ್ದ ಸತೀಶ್ಗೆ ಸರ್ಕಾರಿ ಕೆಲಸ ಸಿಕ್ಕಿರಲಿಲ್ಲ. ಈ ವಿಚಾರವಾಗಿ ಇಬ್ಬರ ಮಧ್ಯೆ ಹಲವು ಬಾರಿ ಜಗಳವಾಗಿತ್ತು. ನಂತರ ಆಕೆಯ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಇದರಿಂದ ಮನನೊಂದ ಸತೀಶ್ ಸಂಬಂಧಿಕರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸತೀಶ್ ಸಾಯುವ ಮುನ್ನ ಮೊಬೈಲ್ನಲ್ಲಿ ನನ್ನ ಸಾವಿಗೆ ಈಕೆಯೇ ಕಾರಣ ಎಂದೂ ಬರೆದುಕೊಂಡಿದ್ದು ಈಕೆಗೆ ತಕ್ಕ ಶಿಕ್ಷೆ ಆಗಬೇಕು ಎಂದು ಯುವಕನ ಮನೆಯವರು ಆಗ್ರಹಿಸಿದ್ದಾರೆ.