ಚಿಕ್ಕಮಗಳೂರು: ಮಹಿಳಾ ಕಾನ್ಸ್ಟೆಬಲ್ ವರ್ಗಾವಣೆ ವಿಚಾರ ಸಂಬಂಧ ತಮ್ಮ ಮೇಲಿನ ಆರೋಪದ ಬಗ್ಗೆ ಕಡೂರು ಶಾಸಕ ಆನಂದ್ ಸ್ಪಷ್ಟನೆ ನೀಡಿದ್ದಾರೆ. ತಾವು ಯಾರನ್ನೂ ಕೂಡ ದುರುದ್ದೇಶಪೂರ್ವಕವಾಗಿ ವರ್ಗಾವಣೆ ಮಾಡಿಸಿಲ್ಲ. ಮಹಿಳಾ ಕಾನ್ಸ್ಟೆಬಲ್ ಯಾರೆಂಬುದೂ ತಮಗೆ ಗೊತ್ತಿಲ್ಲ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಸಹಜ ಪ್ರಕ್ರಿಯೆ ಎಂದು ಶಾಸಕರು ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಕೆಲ ದಿನಗಳ ಹಿಂದೆ ಮಹಿಳಾ ಕಾನ್ಸ್ಟೆಬಲ್ವೊಬ್ಬರು ನಮ್ಮ ಮನೆಗೆ ಬಂದು ನನ್ನನ್ನು ಯಾಕೆ ವರ್ಗಾವಣೆ ಮಾಡಿದ್ದೀರಾ. ಯಾಕೆ ಟ್ರಾನ್ಸ್ಫರ್ ಮಾಡಿಸಿದ್ದೀರಾ ಎಂದು ಏರುಧ್ವನಿಯಲ್ಲಿ ಕೇಳಿದರು. ಆಗ ನಾನು ಸೌಜನ್ಯದಿಂದಲೇ ಪ್ರತಿಕ್ರಿಯಿಸಿದ್ದು, ಈ ವಿಚಾರ ನನಗೆ ಗೊತ್ತಿಲ್ಲ. ನಿಮ್ಮ ಹೆಸರೂ ನನಗೆ ತಿಳಿದಿಲ್ಲ. ಹೀಗಿರುವಾಗ ನಾನು ಹೇಗೆ ವರ್ಗಾವಣೆ ಮಾಡಿಸಲಿ. ನಾನು ಪತ್ರ ಕೊಟ್ಟಿದ್ರೆ, ಅದನ್ನು ತೆಗೆದುಕೊಂಡು ಬನ್ನಿ, ರದ್ದುಪಡಿಸಿಕೊಡುತ್ತೇನೆ. ಎಸ್ಪಿ ಅವರು ವರ್ಗಾವಣೆ ಮಾಡಿರಬಹುದು ಎಂದು ಹೇಳಿ ಕಳಿಸಿದ್ದೆ'' ಎಂದಿದ್ದಾರೆ.
''ಇದಾದ ಬಳಿಕ ಮಹಿಳಾ ಕಾನ್ಸ್ಟೆಬಲ್ವೊಬ್ಬರು ನನ್ನ ಬಗ್ಗೆ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿರುವ ಬಗ್ಗೆ ಹಲವರು ನನಗೆ ಕರೆ ಮಾಡಿ ತಿಳಿಸಿದರು. ಕಡೂರು ಎಂಎಲ್ಗೆ ಧಿಕ್ಕಾರ, ನನಗೇನಾದರೂ ಆದರೆ ಕಡೂರು ಎಂಎಲ್ಎನೇ ಕಾರಣ ಎಂದೆಲ್ಲ ಸ್ಟೇಟಸ್ ಹಾಕಿಕೊಂಡ ಬಗ್ಗೆ ಮಾಹಿತಿ ತಿಳಿಯಿತು. ಈ ಬಗ್ಗೆ ಪಿಎಸ್ಐಗೆ ವಿಚಾರಿಸಿದಾಗ ಮಹಿಳಾ ಕಾನ್ಸ್ಟೆಬಲ್ ಲತಾ ಕಡೂರು ಠಾಣೆಯಿಂದ ತರೀಕೆರೆಗೆ ವರ್ಗಾವಣೆ ಆಗಿ ಒಂದು ತಿಂಗಳಾಗಿದೆ. ಆದರೆ ರಿಲೀವ್ ಆಗಿಲ್ಲ ಎಂಬ ವಿಚಾರ ಗೊತ್ತಾಯಿತು. ಜೊತೆಗೆ ನನ್ನ ಮನೆಯಿಂದ ತೆರಳಿದ ಬಳಿಕ ಠಾಣೆಗೆ ಬಂದು ಕೆಟ್ಟದಾಗಿ ವರ್ತಿಸಿರುವ ಬಗ್ಗೆಯೂ ತಿಳಿಸಿದರು. ವರ್ತನೆ ಬಗ್ಗೆ ಕ್ಷಮೆ ಇರಲಿ, ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದೆಂದು ಪಿಎಸ್ಐ ಮಾಹಿತಿ ನೀಡಿದರು'' ಎಂದು ಶಾಸಕ ಆನಂದ್ ಹೇಳಿದರು.
''ಪೊಲೀಸ್ ಇಲಾಖೆಯಲ್ಲಿ ಹಲವರು ವರ್ಗಾವಣೆ ಸಂಬಂಧ ನನ್ನ ಬಳಿ ಬಂದು ಪತ್ರ ತೆಗೆದುಕೊಂಡು ಹೋಗಿದ್ದಾರೆ. ಆದರೆ ನಾನು ಯಾರಿಗೂ ಕೂಡ ಠಾಣೆಯಿಂದ ತೆಗೆಯಿರಿ ಎಂದು ಪತ್ರ ಕೊಟ್ಟಿಲ್ಲ, ಅಂತಹ ದುರುದ್ದೇಶ ನನಗಿಲ್ಲ. ಕಾನ್ಸ್ಟೆಬಲ್ ಲತಾ ವಿಚಾರದಲ್ಲಿ ನಾನು ಯಾವುದೇ ಪತ್ರ ನೀಡಿಲ್ಲ. ಅವರು ನನ್ನ ಮನೆಗೆ ಬಂದಾಗಲೇ ನನಗೆ ಅವರ ಪರಿಚಯ ಆಗಿದೆ'' ಎಂದು ಶಾಸಕರು ಸ್ಪಷ್ಟನೆ ನೀಡಿದರು.
ವಿಡಿಯೋ ಬಗ್ಗೆ ಶಾಸಕರ ಸ್ಪಷ್ಟನೆ: ವಿಡಿಯೋ ವೈರಲ್ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ''ಅದು ಸುಮಾರು ಎರಡು ವರ್ಷಗಳ ಹಿಂದಿನ ವಿಡಿಯೋ ಆಗಿದೆ. ದಂಡ ವಿಧಿಸುವ ಸಂದರ್ಭದಲ್ಲಿ ಅಂದಿನ ಪಿಎಸ್ಐವೊಬ್ಬರಿಗೆ ನಾನು ತಿಳಿಹೇಳಿದ ವಿಡಿಯೋ ಅದಾಗಿದೆ. ಜನರಿಗೆ ತೊಂದರೆ ಕೊಡಬೇಡಿ, ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಹೇಳಿದ್ದೆ. ಆಗ ಮಾತನಾಡುತ್ತಿರುವ ಸಂದರ್ಭವು ವಿಡಿಯೋದಲ್ಲಿದೆ. ಆ ವೇಳೆ ಈ ಕಾನ್ಸ್ಟೆಬಲ್ ಇದ್ದರು ಎಂಬ ವಿಚಾರ ನನಗೆ ಗೊತ್ತಿಲ್ಲ. ಉದ್ದೇಶಪೂರ್ವಕವಾಗಿ ನಾನು ಪತ್ರವನ್ನೂ ಕೊಟ್ಟಿಲ್ಲ, ವರ್ಗಾವಣೆಯನ್ನೂ ಮಾಡಿಸಿಲ್ಲ. ಅವಧಿ ಮುಗಿದ ಮೇಲೆ ಸಹಜವಾಗಿ ವರ್ಗಾವಣೆ ಆಗುತ್ತದೆ'' ಎಂದರು.
''ಸಹಜವಾಗಿ ಈ ಹಿಂದೆ ನಾವು ವಿರೋಧಪಕ್ಷದಲ್ಲಿದ್ದಾಗ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವಾಗ ಕೆಲವೊಮ್ಮೆ ನಮಗೂ ಪೊಲೀಸರಿಗೂ ಮಾತಿಗೆ ಮಾತು ಆಗಿರಬಹುದು. ಆದರೆ ಎಲ್ಲರೂ ಸ್ನೇಹಿತರಂತೆಯೇ ಇದ್ದೇವೆ. ಇದೀಗ ನಮ್ಮ ಸರ್ಕಾರದಲ್ಲೂ ಅವರೆಲ್ಲ ಮೊದಲಿನಂತೆಯೇ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮದಲ್ಲಿ ಸುದ್ದಿ ನೋಡಿದ ಮೇಲೆಯೇ ಮಹಿಳಾ ಕಾನ್ಸ್ಟೆಬಲ್ ಅವರು ಸ್ಥಳೀಯರಾಗಿದ್ದಾರೆ ಎಂಬ ವಿಚಾರ ನನಗೆ ಗೊತ್ತಾಗಿದೆ. ನನಗಾಗದ ಕೆಲವರ ಮಾತು ಕೇಳಿಕೊಂಡು ಅವರು ರಾಜಕೀಯ ಪ್ರೇರಿತವಾಗಿ ಈ ರೀತಿ ಆರೋಪ ಮಾಡುತ್ತಿರಬಹುದು'' ಎಂದು ಶಾಸಕ ಆನಂದ್ ಹೇಳಿದರು.
ಕಾನ್ಸ್ಟೆಬಲ್ ಅಮಾನತು: ವರ್ಗಾವಣೆ ಆದೇಶ ಪಾಲನೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಅದರಂತೆ ಕಾನ್ಸ್ಟೆಬಲ್ ಲತಾ ಅವರನ್ನು ವರ್ಗಾವಣೆಗೊಳಿಸಿ ಕಡೂರು ಠಾಣೆಯಿಂದ ಬಿಡುಗಡೆಗೊಳಿಸಲಾಗಿತ್ತು. ಆದರೆ, ಲತಾ ಅವರು ಮೇಲಾಧಿಕಾರಿಗಳ ಆದೇಶ ಪಾಲನೆ ಮಾಡಿಲ್ಲ. ಜೊತೆಗೆ ವರ್ಗಾವಣೆ ವಿರೋಧಿಸಿ ಕಡೂರು ಶಾಸಕರ ವಿರುದ್ಧ ಕಾನ್ಸ್ಟೆಬಲ್ ಲತಾ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿ ದುರ್ನಡತೆ ತೋರಿರುವ ಹಿನ್ನೆಲೆಯಲ್ಲಿ ಕಾನ್ಸ್ಟೆಬಲ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಆದೇಶ ಹೊರಡಿಸಿದ್ದಾರೆ.