ಚಿಕ್ಕಮಗಳೂರು: ಕರ್ನಾಟಕದ ಐದು ಹುಲಿ ಸಂರಕ್ಷಿತಾ ಪ್ರದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ಹುಲಿಗಳ ಸಂತತಿಯಲ್ಲಿ ಗಣನೀಯವಾಗಿ ಏರಿಕೆ ಕಂಡುಬರುತ್ತಿದೆ.
ರಾಜ್ಯದಲ್ಲಿ ಹುಲಿ ಸಂತತಿ ಏರಿಕೆ ಕುರಿತು ಉಲ್ಲಾಸ್ ಕಾರಂತ್ ಅವರು 1986ರಿಂದಲೇ ವೈಜ್ಞಾನಿಕವಾಗಿ ಸಂಶೋಧನೆ ಪ್ರಾರಂಭ ಮಾಡಿದ್ದಾರೆ. ಇವರ ಸಂಶೋಧನೆಯಿಂದ ಹುಲಿಗಳ ಸಂತತಿ ಏರಿಕೆ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಸಹಕಾರಿ ಆಗಿದೆ. ಸಂಶೋಧನೆ ಪ್ರಕಾರ ಚಿಕ್ಕ ಪ್ರಾಣಿಗಳ ಹೆಚ್ಚಳದಿಂದ ಇವುಗಳ ಸಂತತಿ ಅಧಿಕವಾಗಿವೆ ಎಂದು ತಿಳಿದು ಬಂದಿದೆ.
1986ಕ್ಕೂ ಮುಂಚೆ 86 ಹುಲಿಗಳು ಕಂಡು ಬಂದಿದ್ದವು. ನಂತರ ನಿರಂತರ ಸಂಶೋಧನೆಯ ಪ್ರಕಾರ, ಇಲ್ಲಿಯವರೆಗೂ 371 ಹುಲಿಗಳು ಕಂಡು ಬಂದಿದ್ದು, ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ 37ರಿಂದ 42 ಹುಲಿಗಳು ಕಂಡು ಬರುತ್ತಿವೆ ಎಂದು ಜಿಲ್ಲೆಯ ಅರಣ್ಯದ ಇಲಾಖೆಯಿಂದ ಮಾಹಿತಿ ಲಭಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ರಕ್ಷಿತಾರಣ್ಯ ಹಾಗೂ ಅಭಯಾರಣ್ಯ, ಹುಲಿ ಸಂರಕ್ಷಣಾ ಕೇಂದ್ರ ಇರುವುದರಿಂದಲೂ ಹುಲಿಗಳ ಸಂತತಿ ಹೆಚ್ಚಳಕ್ಕೆ ಕಾರಣವಾಗಿದೆ. ಇಲ್ಲಿನ ನೈಸರ್ಗಿಕ ಬೆಟ್ಟಗಳು ಹಾಗೂ ಅರಣ್ಯಗಳು ಇವುಗಳ ಬೆಳವಣಿಗೆಗೆ ಪೂರಕವಾಗಿದೆ ಎಂದು ತಿಳಿದು ಬಂದಿದೆ.
ಓದಿ: ಚಿಕ್ಕಮಗಳೂರು : ಕಸ್ತೂರಿ ರಂಗನ್ ವರದಿ ವಿರೋಧಿಸಿ ಗ್ರಾಮಸ್ಥರಿಂದ ಪಂಜಿನ ಮೆರವಣಿಗೆ
ಹುಲಿ ಸಂತತಿ ಹೆಚ್ಚಳಕ್ಕೆ ಕಾರಣಗಳೇನು?: ಇಲ್ಲಿನ ರಕ್ಷಣಾ ವ್ಯವಸ್ಥೆ, ಹುಲಿ ಬಗ್ಗೆ ಇರುವಂತಹ ಕಾಳಜಿ, ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಚಿಕ್ಕ ಪ್ರಾಣಿಗಳು ಇವುಗಳ ಸಂತತಿ ಪ್ರಗತಿಗೆ ಕಾರಣವಾಗಿದೆ. ಹಾಗೂ ಇಲ್ಲಿನ ವಾತವರಣ ಹುಲಿಗಳ ಬೆಳವಣಿಗೆಗೆ ಹೇಳಿ ಮಾಡಿಸಿದ ಹಾಗೆ ಇದೆ. ಪರಿಣಾಮ ಇಲ್ಲಿ ಸುಮಾರು 40ಕ್ಕೂ ಅಧಿಕ ಹುಲಿಗಳು ಕಂಡು ಬರುತ್ತಿವೆ.
ಒಟ್ಟಾರೆಯಾಗಿ ರಾಜ್ಯದಲ್ಲಿರುವ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ಹುಲಿಗಳ ಸಂತತಿಯಲ್ಲಿ ಹೆಚ್ಚಳ ಕಂಡು ಬರುತ್ತಿದ್ದು, ಜಿಲ್ಲೆಯ ಭದ್ರಾ ಅಭಯರಣ್ಯದಲ್ಲಿಯೂ ಅಷ್ಟೇ ಪ್ರಮಾಣದಲ್ಲಿ ಹುಲಿ ಸಂತತಿಯಲ್ಲಿ ಹೆಚ್ಚಳವಾಗುತ್ತಿದೆ. ಇವುಗಳ ಬೆಳವಣಿಗೆ ಕಂಡು ಪರಿಸರ ಪ್ರಿಯರು ಹಾಗೂ ತಜ್ಞರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.