ಚಿಕ್ಕಮಗಳೂರು: ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೆಸರು ಇವಿಎಂನಲ್ಲಿ ಮೊದಲು ಬಂದಿರುವುದಕ್ಕೆ ಬಿಜೆಪಿ ಮುಖಂಡರು ಆರೋಪ ಮಾಡಿರುವುದನ್ನ ಕುರಿತು, ಮೊದಲು ಪಾರ್ಟಿ ಅಭ್ಯರ್ಥಿಗಳ ಹೆಸರು ಬರುತ್ತದೆ. ಈ ಕುರಿತು ಆರೋಪ ಮಾಡಿದವರು ಚುನಾವಣಾ ಆಯೋಗಕ್ಕೆ ಹೋಗಿ ದೂರು ನೀಡಬಹುದು ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ತಿರುಗೇಟು ನೀಡಿದ್ದಾರೆ.
ಚಿಕ್ಕಮಗಳೂರಲ್ಲಿ ಮಾತನಾಡಿದ ಅವರು, ಮೊದಲು ಪಕ್ಷದ ಅಭ್ಯರ್ಥಿಗಳ ಹೆಸರು ಬರುತ್ತವೆ. ನಂತರ ಸ್ವತಂತ್ರ ಅಭ್ಯರ್ಥಿಗಳ ಹೆಸರು ಬರುತ್ತವೆ. ಈ ಕುರಿತು ಆಕ್ಷೇಪ ಎತ್ತಿದವರು ಚುನಾವಣಾ ಆಯೋಗ ಮತ್ತು ಕೋರ್ಟ್ಗೆ ಹೋಗಿ ದೂರು ನೀಡಬಹುದು ಎಂದರು.
ಮುಖ್ಯಮಂತ್ರಿ ತಮ್ಮ ಪ್ರಭಾವ ಬೀರಿ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಬಾರದು. ಕಾನೂನಿನ ಬಗ್ಗೆ ಅರಿವಿರಬೇಕು. ಜಿಲ್ಲಾಧಿಕಾರಿ ತಾರತಮ್ಯ ಮಾಡಿದ್ದಾರೆ ಎಂಬ ಆರೋಪ ಸರಿಯಲ್ಲ. ಈಗಾಗಲೇ ಚುನಾವಣಾ ವೀಕ್ಷಕರು 5 ಪುಟಗಳ ಪ್ರತಿಕ್ರಿಯೆ ನೀಡಿದ್ದಾರೆ. ಜನರಿಗೆ ತಪ್ಪು ಸಂದೇಶ ರವಾನಿಸಬಾರದು. ಇದು ಯಾರಿಗೂ ಶೋಭೆ ತರೊಲ್ಲ. ಮಂಡ್ಯ ಜನರನ್ನು ತಪ್ಪು ದಾರಿಗೆ ಎಳೆಯಬಾರದು. ಸುಮಲತಾ ಪರ ಯಾರು ಬೇಕಾದರೂ ಹೋಗಿ ಪ್ರಚಾರ ಮಾಡಬಹುದು. ಪ್ರಚಾರ ಮಾಡಲು ಅವರಿಗೆ ಹಕ್ಕು ಇದೆ. ಉಳಿದಿರುವುದನ್ನ ಜನ ತೀರ್ಮಾನ ಮಾಡುತ್ತಾರೆ ಎಂದು ಭೋಜೇಗೌಡ ಹೇಳಿದರು.