ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಕಾರ್ಫ್ ಮತ್ತು ಕೇಸರಿ ಶಾಲು ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಾಲೇಜಿನಲ್ಲಿ ಇಂದು ಕರೆಯಲಾಗಿದ್ದ ಪೋಷಕರ ಸಭೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗಳಿಗೆ ಸ್ಕಾರ್ಫ್ ಧರಿಸುವಂತಿಲ್ಲ ಹಾಗೂ ತಲೆಯ ಮೇಲೆ ವೇಲ್ ಹಾಕಿಕೊಂಡು ಬರಬಹುದು ಎಂಬ ನಿರ್ಧಾರಕ್ಕೆ ಬರಲಾಗಿದೆ. ಇದರಿಂದ ಕೇಸರಿ ಶಾಲು ಮತ್ತು ಸ್ಕಾರ್ಫ್ ಮಧ್ಯೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಅಂತ್ಯ ಕಂಡಿದೆ.
ಕಾಲೇಜಿನ ಸಭಾಂಗಣದಲ್ಲಿ ನಡೆದ ಪೋಷಕರ ಸಭೆಯಲ್ಲಿ ಪ್ರಾಂಶುಪಾಲ ಅನಂತ್.ಎಸ್ ಮಾತನಾಡಿ, 2018 ರಲ್ಲಿ ಇದೇ ರೀತಿ ವಿವಾದ ಉಂಟಾಗಿತ್ತು. ಆಗ ತಲೆಯ ಮೇಲೆ ವೇಲ್ ಹಾಕಿಕೊಳ್ಳಲು ಮಾತ್ರ ಅವಕಾಶ ಕೊಡಲಾಗಿತ್ತು. ಈ ಬಾರಿಯೂ ಎಲ್ಲರ ಅಭಿಪ್ರಾಯವನ್ನು ಪಡೆದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ವಿದ್ಯಾರ್ಥಿಗಳು ಕಾಲೇಜಿನ ಶಿಸ್ತು ಕ್ರಮ ಉಲ್ಲಂಘಿಸದಂತೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಾಗುವುದು. ಯಾರಾದರೂ ವಿದ್ಯಾರ್ಥಿಗಳು ಇಂದಿನ ತೀರ್ಮಾನಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಪಾಲಕರನ್ನು ಕರೆಸಿ ವರ್ಗಾವಣೆ ಪತ್ರವನ್ನು ನೀಡಲಾಗುತ್ತದೆ ಎಂದು ಎಚ್ಚರಿಸಿದರು.
ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಶಿಸ್ತಿನಿಂದ ವರ್ತಿಸಬೇಕು. ಕಾಲೇಜಿನಲ್ಲಿ ಭಾವನೆಗಳನ್ನು ಕೆರಳಿಸುವಂತ ಕೆಲಸ ಆಗಬಾರದು. ಸಮವಸ್ತ್ರದ ಕುರಿತು ಈ ಹಿಂದೆ ಪಾಲಕರ ಸಭೆಯಲ್ಲಿ ನಿರ್ಧಾರವಾದಂತೆ ತೀರ್ಮಾನ ಮುಂದುವರೆಯಬೇಕು. ವಿದ್ಯಾರ್ಥಿಗಳು ಕಲಿಕೆಗಷ್ಟೇ ಆದ್ಯತೆಯನ್ನು ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಶಾಸಕ ಅಜಯ್ ಸಿಂಗ್ಗೆ ಮೂರನೇ ಬಾರಿಗೆ ಕೊರೊನಾ ಪಾಸಿಟಿವ್