ಚಿಕ್ಕಮಗಳೂರು: ಇಂಡಿಯನ್ ಸ್ಪೋರ್ಟ್ಸ್ ಹಾನರ್ ಅವಾರ್ಡ್ನಲ್ಲಿ ಕಾಫಿ ನಾಡಿನ ಯುವತಿಗೆ ಗೌರವ ದೊರೆತಿದೆ.
ಚಿತ್ರೋದ್ಯಮ, ಕ್ರಿಕೆಟ್, ಅಥ್ಲೆಟಿಕ್ಸ್ನಲ್ಲಿ ಸಾಧನೆಗೈದವರಿಗೆ ನೀಡೋ ಅವಾರ್ಡ್ ಇದಾಗಿದ್ದು, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಫೌಂಡೇಶನ್ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವು ರಾಜ್ಯದ ಗಣ್ಯರು ಭಾಗಿಯಾಗಿದ್ದರು.
ಕರ್ನಾಟಕದಿಂದ ಆಯ್ಕೆಯಾಗಿದ್ದ ಚಿಕ್ಕಮಗಳೂರಿನ ರಕ್ಷಿತಾ ರಾಜು, ಏಷ್ಯಾ ಪ್ಯಾರಾ ಗೇಮ್ಸ್ನಲ್ಲಿ 1500 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ಹಿಂದೆ ಪ್ರಧಾನಿ ಮೋದಿಯವರಿಂದಲೂ ರಕ್ಷಿತಾ ರಾಜು ಮೆಚ್ಚುಗೆ ಪಡೆದುಕೊಂಡಿದ್ದರು.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುಡ್ನಹಳ್ಳಿ ಯುವತಿ ರಕ್ಷಿತಾ ರಾಜು ಚಿಕ್ಕಮಗಳೂರಿನಲ್ಲಿರುವ ಆಶಾಕಿರಣ ಅಂಧ ಮಕ್ಕಳ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಹಾಲಿವುಡ್, ಬಾಲಿವುಡ್ ದಿಗ್ಗಜರ ಜೊತೆ ಗೌರವ ಪಡೆದ ರಕ್ಷಿತಾ ರಾಜು ಕನ್ನಡದ ಹೆಮ್ಮೆಯ ಪುತ್ರಿಯಾಗಿದ್ದು, ಅಮಿತಾಬ್ ಬಚ್ಚನ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಪ್ರಿಯಾಂಕ ಚೋಪ್ರಾ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಶಸ್ತಿ ಸ್ವೀಕಾರ ಮಾಡುವ ವೇಳೆ ಕನ್ನಡದಲ್ಲೇ ಮಾತನಾಡಿ ರಕ್ಷಿತಾ ರಾಜು ಸಂತಸ ಹಂಚಿಕೊಂಡಿದ್ದಾಳೆ. ತನ್ನ ಕೋಚ್ ರಾಹುಲ್ ಜೊತೆ ನಿನ್ನೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶಸ್ತಿ ಪಡೆದುಕೊಂಡು ಚಿಕ್ಕಮಗಳೂರು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.