ಚಿಕ್ಕಮಗಳೂರು: ನಾನು ಸ್ವಲ್ಪ ಒರಟ, ಹಳ್ಳಿ ಭಾಷೆಯಲ್ಲಿ ಮಾತಾಡ್ತೀನಿ. ಈ ಕಾರಣಕ್ಕೆ ಬಿಜೆಪಿ, ಜೆಡಿಎಸ್ನ ಎಲ್ಲರೂ ನನ್ನ ಮೇಲೆ ಮುಗಿ ಬೀಳ್ತಾರೆ. ಇವರಿಗೆ ನಾನೊಬ್ಬನೇ ಟೀಕೆ ಮಾಡಲು ಸಿಕ್ಕಿರುವುದು ಎಂದು ಜಿಲ್ಲೆಯ ಕಡೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರು ಗೋಮಾಂಸ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ನಾನು ದನದ ಮಾಂಸ, ಎಮ್ಮೆ ಮಾಂಸ ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ ತಿಂತೀನಿ ಅಂದೆ. ನನ್ನ ಇಷ್ಟ, ನೀನು ಯಾವನ್ ಕೇಳಕ್ಕೆ? ನಂಗಿಷ್ಟ, ನಾನು ತಿಂತೀನಿ ಅಂದೆ. ಇದಾದ ಬಳಿಕ ನನ್ನ ವಿರುದ್ಧ ವ್ಯಾಖ್ಯಾನಗಳು, ಚರ್ಚೆಗಳು ಆಗುವುದಕ್ಕೆ ಶುರುವಾದವು.
ಓಟು ಹಾಕಲು ಹೋದಾಗ ನಮ್ಮ ಪಾರ್ಟಿಯವನು ಊಟಕ್ಕೆ ಕರೆದೊಯ್ದ. ಅವತ್ತು ಕೋಳಿ ಮಾಡಿದ್ರು, ಅವತ್ತೇ ಹನುಮ ಜಯಂತಿ. ನಮ್ಮ ಹುಡುಗ ಮಾಂಸ ತಿನ್ನಲ್ಲ ಹನುಮ ಜಯಂತಿ ಅಂದ. ಹನುಮ ಹುಟ್ಟಿದ್ದು ಯಾರಿಗೆ ಗೊತ್ತು? ನಮಗ್ಯಾರಿಗೂ ಗೊತ್ತಿಲ್ಲ. ಮಾಂಸ ತಿಂದರೆ ಏನು? ಹನುಮ ಜಯಂತಿ ಡೇಟ್ ಗೊತ್ತಿಲ್ಲ ಅಂದ್ರೆ ತಪ್ಪಾ?. ಹನುಮ ಯಾವತ್ತು ಹುಟ್ಟಿದ್ದ ನಿಮಗೆ ಗೊತ್ತಾ? ಎಲ್ಲರಿಗೂ ನಾನೊಬ್ಬನೇ ಸಿಕ್ಕಿರುವುದು ಟೀಕೆ ಮಾಡಲು ಎಂದು ಬೇಸರ ವ್ಯಕ್ತಪಡಿಸಿದರು.
ಓದಿ: ಸಿದ್ದರಾಮಯ್ಯ ಪಕ್ಷ ಬಿಡಲು ನಾನು ಕಾರಣನಲ್ಲ: ಹೆಚ್.ಡಿ.ಕುಮಾರಸ್ವಾಮಿ
ಐ ಆಮ್ ವೆರಿ, ವೆರಿ, ಕ್ಲಿಯರ್. ಕುರುಬರನ್ನು ಎಸ್ಟಿ ಮಾಡಿದ್ರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ. ನಾನು ಗುರುಪೀಠ ಮಾಡಿ ಅಹಿಂದ ಪರ ಹೋರಾಡಿದವನು. ಎಲ್ಲರಿಗೂ ನ್ಯಾಯ ಸಿಗಬೇಕೆಂಬುದು ನನ್ನ ಆಶಯ. ನನ್ನ ವಿರುದ್ಧ ಕೆಲವರು ಅಪಪ್ರಚಾರ ಮಾಡಿಕೊಂಡು ಓಡಾಡ್ತಿದ್ದಾರೆ. ಕುರುಬರನ್ನು ಎಸ್ಪಿ ಮಾಡಬೇಡಿ ಎಂದು ವಿರೋಧ ಮಾಡ್ತೀನಾ?. ನಮ್ಮಂತೆ ಹಿಂದುಳಿದವರನ್ನ ಎಸ್ಟಿಗೆ ಸೇರಿಸಬೇಕು. ಉಪ್ಪಾರ, ಗೊಲ್ಲರು ಯಾಕೆ ಎಸ್ಟಿಗೆ ಸೇರಬಾರದು? ಎಂದು ಪ್ರಶ್ನಿಸಿದರು.
ಕುರುಬರನ್ನ ಎಸ್ಟಿಗೆ ಸೇರಿಸಲು ನನ್ನ ವಿರೋಧವಿಲ್ಲ. ಇನ್ನೂ ಕೂಡ ಕುಲಶಾಸ್ತ್ರದ ವರದಿ ಬಂದಿಲ್ಲ. ಈಗ ಅವ್ರು ಮಾಡ್ತಿರೋ ಪಾದಯಾತ್ರೆ, ಹೋರಾಟದ ಅಗತ್ಯವಿಲ್ಲ. ಈಗಾಗಲೇ 4 ಜಿಲ್ಲೆಯದ್ದು ಕಳುಹಿಸಿದ್ದೇವೆ. ಅದರ ವರದಿ ಬಂದಿಲ್ಲ. ಅಗತ್ಯ ಬಿದ್ದಾಗ ಬೀದಿಗಿಳಿದು ಹೋರಾಡೋಣ ಎಂದು ತಿಳಿಸಿದರು.