ಚಿಕ್ಕಮಗಳೂರು: ಮನೆ ಗೋಡೆಯಲ್ಲಿ ಅವಿತುಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗತಜ್ಞರ ನೆರವಿನಿಂದ ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಶೃಂಗೇರಿಯ ದೊಡ್ಡ ಹೊನ್ನೆಯ ಗ್ರಾಮದಲ್ಲಿ ನಡೆದಿದೆ.
ದೊಡ್ಡ ಹೊನ್ನೆಯ ಗ್ರಾಮದ ಪ್ರೇಮ್ ಕುಮಾರ್ ಅವರ ಮನೆಯ ಹಿಂಭಾಗ ಈ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು ಮನೆಯ ಗೋಡೆಯ ಬಿಲದಲ್ಲಿ ಅವಿತುಕೊಂಡಿತ್ತು. ಇದನ್ನು ಗಮನಿಸಿದ ಮನೆಯ ಸದಸ್ಯರು ಕೂಡಲೇ ಶೃಂಗೇರಿಯ ಸ್ನೇಕ್ ಅರ್ಜುನ್ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಅರ್ಜುನ್ ಬಿಲದಲ್ಲಿ ಕಾಳಿಂಗ ಸರ್ಪ ಅವಿತು ಮಲಗಿರುವುದನ್ನು ಖಾತರಿ ಪಡಿಸಿಕೊಂಡು ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಈ ಕಾಳಿಂಗ ಸರ್ಪವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು 10 ಅಡಿ ಇರುವ ಈ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಶೃಂಗೇರಿ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.