ಬಾಗೇಪಲ್ಲಿ: ಮನೆ ಎದುರು ಗಲಾಟೆ ಮಾಡಬೇಡ ಎಂದಿದ್ದಕ್ಕೆ ಕೋಪಗೊಂಡ ವ್ಯಕ್ತಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗೆ ಬೆಂಕಿ ಹಚ್ಚಿದ ಘಟನೆ ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ನಡೆದಿದೆ.
ಆಂಜನಪ್ಪ ಅವರಿಗೆ ಸೇರಿರುವ ಹೋಂಡಾ ಡಿಯೋ ಬೈಕ್ ಸುಟ್ಟುಹೋಗಿದೆ. ಬೆಂಕಿಯಿಂದ ಕಿಟಕಿ, ಗ್ರಾನೈಟ್ ಮತ್ತು ಇತರ ವಸ್ತುಗಳು ಸುಟ್ಟು ಬೂದಿಯಾಗಿವೆ. ಗ್ರಾಮದ ನರಸಿಂಹಮೂರ್ತಿ ಎಂಬಾತ ಕ್ಷುಲ್ಲಕ ಕಾರಣಕ್ಕಾಗಿ ರಾತ್ರಿ 8 ಗಂಟೆ ಸಮಯದಲ್ಲಿ ಆಂಜನಪ್ಪನವರ ಮನೆ ಮುಂಭಾಗದಲ್ಲಿ ಗಲಾಟೆ ಮಾಡುತ್ತಿದ್ದಾಗ, ಮನೆ ಎದುರು ಗಲಾಟೆ ಮಾಡಬೇಡ ಎಂದು ಹೇಳಿದ್ದಾರೆ.
ಮಾತಿಗೆ ಮಾತು ಬೆಳೆದು, ಇಬ್ಬರ ನಡುವೆ ಗಲಾಟೆ ನಡೆದಿದೆ. ಕುಪಿತಗೊಂಡ ನರಸಿಂಹಮೂರ್ತಿ ತಡರಾತ್ರಿ 3 ಗಂಟೆ ಸಮಯದಲ್ಲಿ ಆಂಜಿನಪ್ಪ ಮನೆಯನ್ನು ಹೊರಗಿನಿಂದ ಲಾಕ್ ಮಾಡಿ ಮನೆ ಮುಂದೆ ನಿಂತಿದ್ದ ಬೈಕ್ಗೆ ಬೆಂಕಿ ಹಚ್ಚಿದ್ದಾನೆ. ಇದನ್ನು ಗಮನಿಸಿದ ನೆರೆಮನೆಯವರು ಕೋಡಲೇ ಬೆಂಕಿ ನಂದಿಸಿ ಬಾಗೇಪಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.