ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಕೆಲಸ ಕಾರ್ಯಗಳಲ್ಲಿ ಅಸಹಾಕಾರ ತೋರುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿಂತಾಮಣಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಕೋರ್ಲಪರ್ತಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಾಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಧರ ಬಾಬು ಎಂಬುವವರು ಚುನಾಯಿತ ಅಧ್ಯಕ್ಷೆಗೆ ನೀಡುವ ಕನಿಷ್ಠ ಗೌರವವನ್ನೂ ನೀಡುತ್ತಿಲ್ಲ. ಅಧ್ಯಕ್ಷೆ ಕೇಳಿದ ಯಾವುದೇ ಮಾಹಿತಿ ನೀಡದೆ ಇಂದು, ನಾಳೆ, ಇಲ್ಲಿಗೆ ಬನ್ನಿ, ಅಲ್ಲಿಗೆ ಬನ್ನಿ ಎಂದು ತಿರುಗಾಡಿಸುತ್ತಾರೆ. ನನಗೆ ಈ ರೀತಿಯಾಗಿ ಅಲೆದಾಡಿಸುವ ಅಧಿಕಾರಿ, ಸಾಮಾನ್ಯ ಜನರ ಕೆಲಸ ಹೇಗೆ ಮಾಡುತ್ತಾರೆ ಎಂಬುದನ್ನು ಊಹಿಸಿಕೊಳ್ಳಿ ಎಂದು ಮಂಜುಳಾ ಅಸಮಾಧಾನ ವ್ಯಕ್ತಪಡಿಸಿದರು.
ಪಂಚಾಯಿತಿ ಪುಸ್ತಕ ಮತ್ತು ಸದಸ್ಯರ ಹಾಜರಾತಿ ಪುಸ್ತಕದ ಪ್ರತಿಗಳನ್ನು ನೀಡುವಂತೆ 15 ದಿನಗಳಿಂದ ಕೇಳುತ್ತಿದ್ದರೂ ನೀಡುತ್ತಿಲ್ಲ. ಸೋಮವಾರ 4 ಗಂಟೆಗೆ ನೀಡುವುದಾಗಿ ತಿಳಿಸಿದ್ದರು. ಬಳಿಕ ಕಚೇರಿಗೆ ಬರಲೇ ಇಲ್ಲ. ನಿರಂತರವಾಗಿ ಕರೆ ಮಾಡಿದ ನಂತರ ಮಂಗಳವಾರ 10ಕ್ಕೆ ಪಂಚಾಯಿತಿ ಕಚೇರಿಗೆ ಬನ್ನಿ ಎಂದರು. ಇಂದೂ ಬರಲಿಲ್ಲ, ದೂರವಾಣಿ ಮೂಲಕ ಸಂಪರ್ಕಿಸಿದರೆ ಚಿಂತಾಮಣಿಗೆ ಬನ್ನಿ ಎಂದರು. ಇಲ್ಲಿಗೆ ಬಂದರೆ ಇಲ್ಲಿಯೂ ನೀಡದೆ ಹೊರಟು ಹೋದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿ ಕೆಲವು ಸದಸ್ಯರೊಂದಿಗೆ ಶಾಮೀಲಾಗಿ ನಕಲಿ ದಾಖಲೆಗಳನ್ನು ಠರಾವು ವಹಿಯಲ್ಲಿ ನಮೂದಿಸಿದ್ದಾರೆ. ಸಭೆಯಲ್ಲಿ ಚರ್ಚೆಯಾಗದ ವಿಷಯಗಳನ್ನು ಠರಾವು ಪುಸ್ತಕದಲ್ಲಿ ನಮೂದಿಸಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಬಿಲ್ಗಳಲ್ಲಿ ನನ್ನ ಸಹಿಯನ್ನು ಸಹ ನಕಲು ಮಾಡಿದ್ದಾರೆ. ಪರಿಶೀಲನೆ ನಡೆಸಲು ಯಾವುದೇ ದಾಖಲೆಗಳನ್ನು ಸಹ ನೀಡುತ್ತಿಲ್ಲ ಎಂದು ದೂರಿದರು.
ಕಚೇರಿಗೂ ಸಮಯಕ್ಕೆ ಸರಿಯಾಗಿ ಹಾಜರಾಗುವುದಿಲ್ಲ. ತೆರಿಗೆ ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡು ನಂತರ ಖರ್ಚುಗಳ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಾರೆ. ವಸೂಲಿಯಾದ ತೆರಿಗೆಯನ್ನು ನಿಯಮಾನುಸಾರ ಬ್ಯಾಂಕಿಗೆ ಜಮಾ ಮಾಡುತ್ತಿಲ್ಲ. ನರೇಗಾ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೂ ಈ ಬಗ್ಗೆ ದೂರು ನೀಡಿದ್ದೇನೆ ಎಂದು ತಿಳಿಸಿದರು.
ನಿಯಮಾನುಸಾರ ಕ್ರಮವಿಲ್ಲ : ನಿರಂತರವಾಗಿ 3 ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿರುವ ಸದಸ್ಯರಿಗೆ ನಿಯಮಾನುಸಾರ ಕಾರಣ ಕೇಳಿ ನೋಟಿಸ್ ನೀಡಿ ವರದಿ ಸಿದ್ಧಪಡಿಸಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಸಲ್ಲಿಸುವಂತೆ ಸೂಚಿಸಿದ್ದೆ. ಶ್ರೀಧರ ಬಾಬು ಗೈರು ಹಾಜರಾಗಿರುವ ಸದಸ್ಯರೊಂದಿಗೆ ಶಾಮೀಲಾಗಿ ಅಧ್ಯಕ್ಷರ ನಿರ್ದೇಶನದ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮಂಜುಳಾ ಆರೋಪಿಸಿದ್ದಾರೆ.