ಚಿಕ್ಕಬಳ್ಳಾಪುರ : ಕಳೆದ ಒಂದು ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಸ್ತೇನಹಳ್ಳಿಯ ನೂತನ ಪಂಚಾಯತ್ ಕಟ್ಟಡಕ್ಕೆ ಕೋರ್ಟ್ ನೋಟಿಸ್ ಕೊಟ್ಟು ಬಾಗಿಲು ಬಂದ್ ಮಾಡಿಸಿದೆ. ಪರಿಣಾಮ ಕಂದಾಯ ಸೇವೆ, ಪಹಣಿ, ಇ-ಸ್ವತ್ತು, ನರೇಗಾ ಅಭಿವೃದ್ಧಿ ಕಾಮಗಾರಿ ಸೌಲಭ್ಯಗಳನ್ನು ಪಡೆಯಲು ಇಂದು ಪಂಚಾಯತ್ಗೆ ಭೇಟಿ ಕೊಟ್ಟ ಗ್ರಾಮಸ್ಥರು ಬೇಸರದಿಂದ ಹಿಂತಿರುಗಿದ್ದಾರೆ.
'ಸಾರ್ ನಮಗೆ ಬಿಲ್ ಪಾಸ್ ಆಗಿದೆ. ಪಂಚಾಯತ್ಗೆ ಬಂದು ಹಣ ಪಡೆದುಕೊಳ್ಳಲು ಬಂದ್ರೆ ಪಂಚಾಯತ್ ಕಚೇರಿಗೆ ಬೀಗ ಜಡಿದು ಅಧಿಕಾರಿಗಳು ಮಾಯವಾಗಿದ್ದಾರೆ. ಮುಂಜಾನೆಯಿಂದಲೇ ಕೆಲಸಗಳನ್ನು ಬಿಟ್ಟು ಪಂಚಾಯತ್ನಲ್ಲಿ ಬಾಕಿ ಇರುವ ಕೆಲಸಗಳನ್ನು ಮಾಡಿಸಿಕೊಳ್ಳಲು ಬಂದ್ರೆ ಈಗ ಏಕಾಏಕಿ ಕಟ್ಟಡಕ್ಕೆ ಬೀಗ ಜಡಿದಿದ್ದಾರೆ' ಎಂದು ಮಹಿಳೆಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ 3 ತಿಂಗಳಿಂದ ಇ-ಸ್ವತ್ತು ಮಾಡಿಸಲು ಪಂಚಾಯತ್ಗೆ ಅಲೆದಾಡುತ್ತಿದ್ದು, ಇಂದು ಬರುವಂತೆ ಅಧಿಕಾರಿಗಳು ಸಮಯವನ್ನು ನೀಡಿದ್ರು. ಆದರೆ, ಈಗ ಇ-ಸ್ವತ್ತು ಪಡೆಯಲು ಬಂದ್ರೆ ಬೀಗ ಜಡಿದು ಅಧಿಕಾರಿಗಳು ಕಾಣೆಯಾಗಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಗ್ರಾಪಂ ಆಡಳಿತವನ್ನು ಮಾಜಿ ಶಾಸಕರ ಬಣದ ಮುಖಂಡರು ಆಡಳಿತ ನಡೆಸುತ್ತಿದ್ದರು.
ಈಗ ಹಾಲಿ ಶಾಸಕರಾದ ಎಂ.ಕೃಷ್ಣಾರೆಡ್ಡಿ ಬಣದ ಮುಖಂಡರು ತಮ್ಮ ಆಡಳಿತದಲ್ಲಿ ನರೇಗಾ ಕಾಮಗಾರಿಯಿಂದ ನೂತನ ಗ್ರಾಪಂ ಕಟ್ಟಡವನ್ನು ಅಭಿವೃದ್ಧಿಪಡಿಸಿದ್ದಾರೆ. ಸದ್ಯ ಇದೇ ವಿಚಾರ ಮಾಜಿ ಶಾಸಕರ ಬಣದ ಮುಖಂಡರ ನಿದ್ದೆಗೆಡಿಸಿದ್ದು, ನೂತನ ಕಟ್ಟಡಕ್ಕೆ ಕೋರ್ಟ್ನಿಂದ ಆದೇಶ ತಂದು ಬೀಗ ಜಡಿಸಿದ್ದಾರೆ ಎಂದು ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.
ಓದಿ: ಕೊರೊನಾ ಹೊಡೆತ, ಪ್ರೇಕ್ಷಕರ ಕೊರತೆ.. ಇತಿಹಾಸದ ಪುಟ ಸೇರಿದ ಮೈಸೂರಿನ 'ಒಲಂಪಿಯಾ'!