ಚಾಮರಾಜನಗರ: ಬೈಕಿನಲ್ಲಿ ತೆರಳುತ್ತಿದ್ದವರಿಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಚಾಮರಾಜನಗರದ ಸಿದ್ಧಾರ್ಥ ಚಿತ್ರಮಂದಿರ ಸಮೀಪ ನಡೆದಿದೆ.
ಹೊಂಗನೂರು ಗ್ರಾಮದ ನಟರಾಜು ಹಾಗೂ ಬ್ಯಾಡಮೂಡ್ಲು ಗ್ರಾಮದ ಮಲ್ಲ ಮೃತಪಟ್ಟ ಯುವಕರು. ಇವರು ಬೈಕಿನಲ್ಲಿ ಊರಿನತ್ತ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ಇಬ್ಬರೂ ಅಸುನೀಗಿದ್ದಾರೆ. ಈ ಸಂಬಂಧ ಟಿಪ್ಪರ್ ಹಾಗೂ ಚಾಲಕನನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸದ್ಯ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.