ಚಾಮರಾಜನಗರ: ಕನ್ನಡ ಚಿತ್ರರಂಗದ ವರನಟ, ದಿ. ಡಾ.ರಾಜ್ಕುಮಾರ್ ಅವರ ಪತ್ನಿ ದಿ. ಪಾರ್ವತಮ್ಮ ರಾಜ್ಕುಮಾರ್ ಅವರ ಸಹೋದರ ಎಸ್.ಎ. ಶ್ರೀನಿವಾಸ್ ಅವರ ಪುತ್ರ ಸೂರಜ್ ಕುಮಾರ್ (ಧೀರಜ್) ಅವರು ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚಿಕ್ಕಹುಂಡಿ ಗೇಟ್ ಬಳಿ ಶನಿವಾರ ನಡೆದಿದೆ. ಇವರಿಗೆ ಕೇವಲ 35 ವರ್ಷ. ಇವರು ಕೆಲವು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.

ಬೈಕ್ಗೆ ಟಿಪ್ಪರ್ ಡಿಕ್ಕಿ, ಬಲಗಾಲು ಕಟ್: ಊಟಿಗೆ ಸೋಲೋ (ಏಕಾಂಗಿ) ಟ್ರಿಪ್ ತೆರಳಿದ್ದ ಸೂರಜ್ ಕುಮಾರ್ ಹಿಂತಿರುಗುವಾಗ ಟಿಪ್ಪರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಗಾಯಾಳುವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಲು ಸಂಪೂರ್ಣ ನಜ್ಜುಗುಜ್ಜಾಗಿದ್ದು ಬಲಗಾಲನ್ನು ಸಂಪೂರ್ಣವಾಗಿ ತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿದೆ. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ: ಸೂರಜ್ ಕುಮಾರ್ ಕರ್ನಾಟಕದ ಹೆಸರಾಂತ ಚಿತ್ರ ನಿರ್ಮಾಪಕ ಎಸ್.ಎ.ಶ್ರೀನಿವಾಸ್ ಅವರ ಪುತ್ರ. ಶ್ರೀನಿವಾಸ್ ಅವರು ಪಾರ್ವತಮ್ಮ ರಾಜ್ಕುಮಾರ್ ಅವರ ತಮ್ಮ. ಐರಾವತ ಮತ್ತು ತಾರಕ್ ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದರು. ಸೂರಜ್ ಕುಮಾರ್ ನೀನಾಸಂ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯಲ್ಲಿ ನಟನೆಗೆ ತರಬೇತಿ ಪಡೆದುಕೊಂಡಿದ್ದರು.
ಶಿವರಾಜ್ ಕುಮಾರ್ ದಂಪತಿ ಭೇಟಿ: ನಿನ್ನೆ ಮಧ್ಯಾಹ್ನ ಈ ಅಪಘಾತ ಸಂಭವಿಸಿದ್ದು, ತಕ್ಷಣ ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಬೇಗೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಟಿಪ್ಪರ್ ಚಾಲಕ ಹಾಗೂ ಮಾಲೀಕನ ಮೇಲೆ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಮೈಸೂರು ಆಸ್ಪತ್ರೆಗೆ ಶಿವರಾಜ್ ಕುಮಾರ್ ದಂಪತಿ ಭೇಟಿ ನೀಡಿ, ತೀವ್ರ ಗಾಯಗೊಂಡಿರುವ ಸೂರಜ್ ಕುಮಾರ್ ಅವರ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ- ಭೀಕರ ದೃಶ್ಯ ಫೋಟೋಗಳಲ್ಲಿ!
ಮತ್ತೊಂದು ಅಪಘಾತ ಪ್ರರಣ: ಇನ್ನೊಂದು ಪ್ರಕರಣದಲ್ಲಿ, ಬೆಂಗಳೂರು- ಮೈಸೂರು ಹೆದ್ದಾರಿಯ ಫ್ಲೈ ಓವರ್ ಬಳಿ ಇಂದು ಬೆಳಗ್ಗೆ ಅಪಘಾತ ಸಂಭವಿಸಿದೆ. ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಮಣಿ ಹಾಗೂ ಜನಾರ್ಧನ ಪೂಜಾರಿ ಎಂಬುವವರು ಮೃಪಟ್ಟಿದ್ದಾರೆ. ಪೊಲೀಸರು ಅಫಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವ್ಯಕ್ತಿಯ ಕತ್ತು ಸೀಳಿ ರಕ್ತ ಕುಡಿದು ಬೀಭತ್ಸ ಕೃತ್ಯ! ಬೆಚ್ಚಿಬಿದ್ದ ಚಿಕ್ಕಬಳ್ಳಾಪುರ