ಚಾಮರಾಜನಗರ: ಭಕ್ತರ ಆಕ್ರೋಶದಿಂದ ವಿವಾದಕ್ಕೆ ಕಾರಣವಾಗಿರುವ ಗರುಡ ಗಮನ ವೃಷಭ ವಾಹನ ಹಾಡಿನ ವಿರುದ್ಧ ಈಗ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕಿಡಿಕಾರಿದ್ದು ಚಿತ್ರದಲ್ಲಿನ ಹಾಡನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಇಂದು ಸಂಜೆ ಈಟಿವಿ ಭಾರತದೊಂದಿಗೆ ಅವರು ಮಾತನಾಡಿ, ಶತಮಾನದ ಜಾನಪದವನ್ನು, ಸಾಂಸ್ಕೃತಿಕ ಮೌಲ್ಯವನ್ನು ಹಿಂಸೆಯ ಸಂಭ್ರಮಕ್ಕೆ ಬದಲಿಸುವುದು ಸರಿಯೇ?, ಸಿನಿಮಾದಲ್ಲಿ ಕೊಲೆಗಾರನು ನರ್ತಿಸುವಾಗ ಮಾದಪ್ಪನ ಹಾಡನ್ನು ಬದಲಿಸುವುದು ಎಷ್ಟು ಸರಿ? ಎಂದು ಅವರು ಕಿಡಿಕಾರಿದರು.
ಮಲೆ ಮಹದೇಶ್ವರರು ಓರ್ವ ಪವಾಡಪುರುಷ. ಮಹದೇಶ್ವರರು ನೈಜ ವ್ಯಕ್ತಿಯಾಗಿದ್ದು ದೈವತ್ವವನ್ನು ಪಡೆದವರು. ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ, ಅವರು ಸಕಲ ಜೀವಿಗಳಿಗೂ ಒಳ್ಳೆಯದನ್ನೇ ಬಯಸಿ ಅಲ್ಪರಿಗೆ ಜ್ಞಾನ ನೀಡುವಂತ ಮಹಾಮಹಿಮರ ಬಗ್ಗೆ ಇರುವ ಹಾಡನ್ನು ಕ್ರೌರ್ಯಕ್ಕೆ ಬಳಸಿರುವ ನಿರ್ದೇಶಕರನ್ನು ಮಹದೇಶ್ವರರೇ ಹರಸಬೇಕಿದೆ, ಮುಂದೆ ಈ ರೀತಿಯ ಚಿಂತನೆ ಬಾರದಿರಲಿ ಎಂಬುದು ನನ್ನ ಆಶಯ ಎಂದು ರಾಜ್ ಬಿ.ಶೆಟ್ಟಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಹೆಚ್ಚಿನ ಓದಿ: ಮಲೆಮಹದೇಶ್ವರ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ: ಒಂದೇ ದಿನ 19.5 ಲಕ್ಷ ರೂ.ಸಂಗ್ರಹ
ಚಿತ್ರದಲ್ಲಿನ ಹಾಡನ್ನು ತೆಗೆದು ಮರು ಬಿಡುಗಡೆ ಮಾಡುವುದು ಉತ್ತಮ ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ. ಮೂರು ದಿನಗಳಿಂದ ಚಿತ್ರದಲ್ಲಿ ಬಳಸಿರುವ ಸೋಜಿಗದ ಸೂಜು ಮಲ್ಲಿಗೆ ಹಾಡಿನ ವಿರುದ್ಧ ಸಾಹಿತಿಗಳು,ಕಲಾವಿದರು ಹಾಗೂ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ. ಈಗ, ಮಹದೇಶ್ವರ ಬೆಟ್ಟದ ಸ್ವಾಮೀಜಿಯೂ ಮಾತನಾಡಿರುವುದರಿಂದ ಭಕ್ತರ ಆಕ್ರೋಶಕ್ಕೆ ಬಲ ಬಂದಂತಾಗಿದೆ.