ನವದೆಹಲಿ: ಸಂಸತ್ನ ಬಜೆಟ್ ಅಧಿವೇಶನದಲ್ಲಿಂದು ಅಮೆರಿಕದಿಂದ ಗಡೀಪಾರಾದ ಭಾರತೀಯರ ವಿಚಾರದ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳ ನಾಯಕರು ಪಟ್ಟು ಹಿಡಿದರು. ಹೀಗಾಗಿ ಎರಡೂ ಸದನಗಳಲ್ಲಿ ಗದ್ದಲ ಏರ್ಪಟ್ಟಿತು. ಅಮೆರಿಕದಿಂದ ಗಡಿಪಾರಾಗಿರುವ ಭಾರತೀಯರಿಗೆ ಘನತೆ ಕಾಪಾಡುವ ಮತ್ತು ರಾಜತಾಂತ್ರಿಕ ಪ್ರಯತ್ನಗಳ ಕುರಿತು ಪ್ರತಿಪಕ್ಷಗಳು ಧ್ವನಿ ಎತ್ತಿದವು. ಇದರಿಂದ ಲೋಕಸಭೆಯನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.
ದೇಶ ಮತ್ತು ವಿದೇಶಗಳಲ್ಲಿ ಪ್ರತಿಯೊಬ್ಬ ಭಾರತೀಯನ ಘನತೆ ಕಾಪಾಡುವ ಕುರಿತು ಆಯಾಯ ದೇಶಗಳು ಗಮನ ಹರಿಸುವಂತೆ ಮನವರಿಕೆ ಮಾಡಿಕೊಡಬೇಕಾದ ಅವಶ್ಯಕತೆ ಇದೆ. ಈ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಲೋಕಸಭಾ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್ ಮನವಿ ಸಲ್ಲಿಸಿದರು.
ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನಚಕಮಕಿಗೆ ಕಾರಣವಾಯಿತು. ಸದನ ಮುಂದೂಡಿಕೆ ಆಗಿ ಸೇರಿದಾಗಲೂ ಪ್ರತಿಪಕ್ಷದ ಸದಸ್ಯರು ಇದೇ ವಿಚಾರದ ಕುರಿತು ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ, ಸರ್ಕಾರವೂ ಅತ್ಯಂತ ಕಾಳಜಿಯುತವಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣನೆ ಮಾಡಲಿದೆ. ಇದು ಕಳವಳಕಾರಿ ವಿಷಯವಾಗಿದ್ದು, ಜತೆ ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಸರ್ಕಾರವೂ ಈ ವಿಚಾರದಲ್ಲಿ ಗಂಭೀರವಾಗಿದೆ. ವಿದೇಶಗಳು ಕೂಡ ತಮ್ಮದೇ ಆದ ನಿಯಮಗಳನ್ನು ಹೊಂದಿರುತ್ತವೆ. ಈ ಹಿನ್ನಲೆ ಈ ವಿಚಾರವನ್ನು ಮಧ್ಯಾಹ್ನ 12ರಬಳಿಕ ಮಾತನಾಡಿ, ಇದೀಗ ಪ್ರಶ್ನೋತ್ತರ ಕಲಾಪ ಸರಾಗವಾಗಿ ನಡೆಯಲು ಅನುವು ಮಾಡಿ ಕೊಡಿ ಎಂದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಸಂಸದ ಕೆಸಿ ವೇಣುಗೋಪಾಲ್, ಇದು ಬೇಸರ ಮತ್ತು ದುರದೃಷಕರ ಸಂಗತಿ. ಈ ರೀತಿಯ ಘಟನೆ ತಡೆಯಲು ಭಾರತ ಮತ್ತು ಅಮೆರಿಕದ ದ್ವಿಪಕ್ಷೀಯ ಸಂಬಂಧಗಳು ಯಾಕೆ ಸಹಾಯ ಮಾಡುತ್ತಿಲ್ಲ ಎಂದು ತಿಳಿಯುತ್ತಿಲ್ಲ ಎಂದು ಆಕ್ಷೇಪಣೆ ವ್ಯಕ್ತಪಡಿಸಿದರು.
ಇದಾದ ಬಳಿಕವೂ ಸಂಸದರು ಈ ವಿಚಾರ ಚರ್ಚೆಗೆ ಒತ್ತಾಯಿಸಿ ಗದ್ದಲವನ್ನುಂಟು ಮಾಡಿದ್ದರಿಂದ ಸ್ಪೀಕರ್ ಸದನವನ್ನು ಮಧ್ಯಾಹ್ನ 2ಗಂಟೆವರೆಗೂ ಮುಂದೂಡಿಕೆ ಮಾಡಿದರು.
ರಾಜ್ಯಸಭೆಯಲ್ಲೂ ಇದೇ ವಿಚಾರವಾಗಿ ಗದ್ದಲ: ಗಡೀಪಾರಾದ ಭಾರತೀಯರ ವಿಚಾರವನ್ನು ನಿಯಮ 267 ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಎಎಪಿ ಸಂಸದ ಸಂಜಯ್ ಸಿಂಗ್ ಮತ್ತು ಕಾಂಗ್ರೆಸ್ ಸಂಸದ ರೇಣುಕಾ ಚೌಧರಿ ಮನವಿ ಸಲ್ಲಿಸಿದರು.
20,407 ಭಾರತೀಯರ ಗಡೀಪಾರಿಗೆ ಮುಂದಾಗಲಾಗಿದೆ. ಭಾರತೀಯ ಅಧಿಕಾರಿಗಳು ದ್ವಿಪಕ್ಷೀಯ ಮಾತುಕತೆ ನಡೆಸಲು ಮುಂದಾಗಬೇಕು ಎಂದು ಮನವಿ ಮಾಡುತ್ತೇನೆ ಎಂದರು. ಈ ವೇಳೆ ಕೂಡ ಮೇಲ್ಮನೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ, ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಮಧ್ಯಾಹ್ನ ಹೇಳಿಕೆ ನೀಡಲಿರುವ ಜೈ ಶಂಕರ್: ರಾಜ್ಯಸಭೆಯಲ್ಲಿ ಸಂಸದರನ್ನು ಸಮಾಧಾನ ಪಡಿಸಲು ಸ್ಪೀಕರ್ ಜಗದೀಪ್ ದನಕರ್ ಹರಸಾಹಸ ಪಟ್ಟರು. ಗದ್ದಲ ಹೆಚ್ಚಾಗಿದ್ದರಿಂದ ಸದನದ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಇಂದು ಬೆಳಗ್ಗೆ ಈ ವಿಚಾರ ಕುರಿತು ನನ್ನ ಚೆಂಬರ್ನಲ್ಲಿ ಮಾತನಾಡಿದ್ದಾರೆ. ಮಧ್ಯಾಹ್ನ 2ಕ್ಕೆ ಅವರು ಸದನದಲ್ಲಿ ಈ ಬಗ್ಗೆ ಹೇಳಿಕೆ ನೀಡಲಿದ್ದಾರೆ ಎಂದು ಕಿರಣ್ ರಿಜಿಜು ಕೂಡ ಸದನದ ಗಮನಕ್ಕೆ ತಂದರು.
ಇದಾದ ಬಳಿಕ ಮಾತನಾಡಿದ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿ. ಸರ್ಕಾರಕ್ಕೆ ಈ ವಿಚಾರವಾಗಿ ಹೇಳಿಕೆ ನೀಡಲು ನಿರ್ದೇಶಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಇದನ್ನೂ ಓದಿ: ಸಾರ್ವಕಾಲಿಕ ಏರಿಕೆ ದಾಖಲಿಸಿದ ಚಿನ್ನ.. ಅಂಬರ ಏರಿದ ಬಂಗಾರದ ಇಂದಿನ ದರವೆಷ್ಟು ಗೊತ್ತಾ?
ಇದನ್ನೂ ಓದಿ: ಕಾಶ್ಮೀರ: ಸೇನಾಪಡೆಗಳ ಗುಂಡಿನ ದಾಳಿಯಿಂದ ಟ್ರಕ್ ಚಾಲಕ ಸಾವು ಆರೋಪ