ಚಾಮರಾಜನಗರ: ದಶಕಗಳ ಬೇಡಿಕೆಯಾದ ಮೆಟ್ಟುಪಾಳ್ಯಂ ಯೋಜನೆ ಮತ್ತು ಚಾಮರಾಜನಗರಕ್ಕೆ ಹೆಚ್ಚುವರಿ ರೈಲುಗಳನ್ನು ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಸಂಘಟನೆ ಕಾರ್ಯಕರ್ತರು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ತಮಟೆ ಬಾರಿಸಿ ಚಾಮರಾಜನಗರ ಜಿಲ್ಲೆಯನ್ನು ಈ ಬಾರಿಯಾದರೂ ಬಜೆಟ್ನಲ್ಲಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಘೋಷಿಸಿದ್ದ ಚಾಮರಾಜನಗರ- ಹೆಜ್ಜಾಲ ರೈಲ್ವೆ ಯೋಜನೆ, ನನೆಗುದಿಗೆ ಬಿದ್ದಿರುವ ಚಾಮರಾಜನಗರ-ಮೆಟ್ಟುಪಾಳ್ಯಂ ಯೋಜನೆಗಳನ್ನು ಈ ಬಾರಿ ಅನುಷ್ಠಾನಗೊಳಿಸಬೇಕು. ಚಾಮರಾಜನಗರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಮೈಸೂರಿನಿಂದ ಹೆಚ್ಚುವರಿ ರೈಲುಗಳನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.