ಚಾಮರಾಜನಗರ: ಸಿ. ಟಿ ರವಿ ಹಾಗೂ ಸಚಿವ ಈಶ್ವರಪ್ಪ ಆರ್ಎಸ್ಎಸ್ನ ಕೈಗೊಂಬೆಗಳು, ಅವರು ಹೇಳಿಕೊಟ್ಟಿದ್ದನ್ನು ಇವರು ಮಾತನಾಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೇಳಿದರು.
ಹಿಜಾಬ್ ವಿವಾದದ ಸಂಬಂಧ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ಹೇಳಿಕೆಗಳಿಗೆ ಚಾಮರಾಜನಗರದಲ್ಲಿ ಅವರು ಪ್ರತಿಕ್ರಿಯಿಸಿದರು. ಈಶ್ವರಪ್ಪ ಅವರಿಗೆ ವಿಧ್ಯಾಭ್ಯಾಸನೂ ಇಲ್ಲ, ಮತ್ತೆ ಅವರಿಗೆ ಪ್ರಗತಿಪರ ಧೋರಣೆಯೂ ಇಲ್ಲ. ಹಿಂದುಳಿದ ನಾಯಕರಾಗಿದ್ದುಕೊಂಡು ಲೋಕಸಭಾ ಚುನಾವಣೆಯಲ್ಲಿ ಒಬ್ಬ ಹಿಂದುಳಿದ ವರ್ಗದವರಿಗೂ ಟಿಕೆಟ್ ಕೊಡಿಸಲಿಲ್ಲ. ಅವರಿಗೆ ನಾಚಿಕೆಯಾಗಬೇಕು. ವಿಧಾನಪರಿಷತ್ ಚುನಾವಣೆಯಲ್ಲಿ ಚಲಾವಣೆಗೊಂಡ ಮತ ಪರಿಗಣಿಸಿದಾಗ ಯಾರೂ ನಿರ್ನಾಮ ಆಗುತ್ತಿದ್ದಾರೆ ಎಂದು ಗೊತ್ತಾಗಲಿದೆ ಎಂದು ಈಶ್ವರಪ್ಪ ಹಾಗೂ ಸಿ.ಟಿ ರವಿ ವಿರುದ್ಧ ಕಿಡಿಕಾರಿದರು.
ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಅಭಿವೃದ್ಧಿ ಕಾರಣದಿಂದಲ್ಲ. ಧರ್ಮ-ಧರ್ಮಗಳ ನಡುವೆ, ಜಾತಿಗಳ ನಡುವೆ ಕಂದಕ ನಿರ್ಮಾಣ ಮಾಡಿ ಅಧಿಕಾರ ಹಿಡಿದಿದ್ದಾರೆ. ಕೋಮು ದಳ್ಳುರಿ ಹಬ್ಬಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಮುಗ್ಧ ಮನಸ್ಸಿನ ವಿದ್ಯಾರ್ಥಿಗಳಲ್ಲಿ ಕೋಮು ದ್ವೇಷ ಉಂಟುಮಾಡಿ ರಾಜಕೀಯ ಲಾಭಕ್ಕೆ ಯತ್ನಿಸುತ್ತಿದೆ ಎಂದು ಧ್ರುವ ನಾರಾಯಣ ಆರೋಪಿಸಿದರು.
ಮುಂದಿನ ದಿನಗಳಲ್ಲಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಕೋವಿಡ್ ನಿರ್ವಹಣೆ, ಅಭಿವೃದ್ಧಿ ವಿಚಾರಗಳಲ್ಲಿ ವಿಫಲಗೊಂಡಿದ್ದರಿಂದ ಕಾಂಗ್ರೆಸ್ ಪರ ಅಲೆ ಕಂಡು ಬಂದಿದೆ. ಹೀಗಾಗಿ, ದಿಕ್ಕು ತಪ್ಪಿಸಲು ಹಿಜಾಬ್ ವಿಚಾರವನ್ನು ಬಿಜೆಪಿಗರು ಮುನ್ನೆಲೆಗೆ ತಂದಿದ್ದಾರೆ ಎಂದು ಅವರು ಆರೋಪಿಸಿದರು.
ಹಿಜಾಬ್ ಸಂಬಂಧ ಆಗುತ್ತಿರುವ ಗಲಾಟೆ- ದ್ವೇಷಕ್ಕೆ ಬಿಜೆಪಿ ನಾಯಕರೇ ಹಿನ್ನಲೆ ಗಾಯಕರು ಎಂದು ಆರೋಪಿಸಿದ ಧ್ರುವನಾರಾಯಣ, ಬಹಳಷ್ಟು ಜ್ವಲಂತ ಸಮಸ್ಯೆಗಳಿಗೆ ಪರಿಹರಿಸುವ ಬದಲು ಕೋಮುದಳ್ಳುರಿಗೆ, ವಿದ್ಯಾರ್ಥಿಗಳ ವಿಂಗಡಣೆಗೆ ಮುಂದಾಗಿದ್ದಾರೆ ಎಂದರು.
ನೂರಾರು ವರ್ಷಗಳಿಂದ ಹಿಜಾಬ್ ಹಾಕುತ್ತಿದ್ದಾಗ ಇಲ್ಲದ ವಿವಾದ ಈಗ ಆರಂಭವಾಗಿದೆ. ಹಿಜಾಬ್ ಬಗ್ಗೆ ಅರ್ಜಿ ನ್ಯಾಯಾಲಯದಲ್ಲಿದ್ದು, ಕೋರ್ಟ್ ಮೂಲ ಹಕ್ಕುಗಳಿಗೆ ಗೌರವಿಸಿ ಆದೇಶ ಕೊಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಓದಿ: ಹಿಜಾಬ್ ಧರಿಸುವ ಬಗ್ಗೆ ಮಧ್ಯಂತರ ಆದೇಶಕ್ಕೆ ಹೈಕೋರ್ಟ್ ನಕಾರ..ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗ