ಚಾಮರಾಜನಗರ: ಲೋಕಸಭೆ ಚುನಾವಣೆ ಬಳಿಕ ಲೋಕಲ್ ಫೈಟ್ ರಂಗು ಪಡೆಯುತ್ತಿದೆ. ಜಿಲ್ಲೆಯ ಹನೂರು ಮತ್ತು ಯಳಂದೂರು ಪಟ್ಟಣ ಪಂಚಾಯತಿ ಹಾಗೂ ಗುಂಡ್ಲುಪೇಟೆ ಪುರಸಭೆ ಚುನಾವಣೆ ನಡೆಯುತ್ತಿದೆ.
ಲೋಕ ಅಖಾಡದಲ್ಲಿ ಪ್ರಬಲ ಪೈಪೋಟಿ ನೀಡಿ ಕೆಲವು ಮತಗಳ ಅಂತರದಿಂದ ಸೋಲೊಪ್ಪಿಕೊಂಡ ಆರ್.ಧ್ರುವನಾರಾಯಣ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದು ಕಾಂಗ್ರೆಸ್ ಪಾಳಯಕ್ಕೆ ಹೊಸ ಹುರುಪು ನೀಡಿದಂತಾಗಿದೆ. ಪರಾಭವದ ನೋವಿನ ಛಾಯೆ ಇದ್ದರೂ ತೋರಿಸಿಕೊಳ್ಳದ ಧ್ರುವ ನಾರಾಯಣ, ಯಳಂದೂರು ಹಾಗೂ ಹನೂರಿನಲ್ಲಿ ನಗುನಗುತ್ತಲೇ ಕಾರ್ಯಕರ್ತರತ್ತ ಕೈ ಬೀಸಿ ಪ್ರಚಾರ ನಡೆಸಿ ಎಲ್ಲರ ಗಮನ ಸೆಳೆದರು.
ಸಂಸದರಾಗಿ ಆಯ್ಕೆಯಾಗಿರುವ ಹಳೆ ಹುಲಿ ವಿ.ಶ್ರೀನಿವಾಸ್ ಪ್ರಸಾದ್ ಗೆದ್ದ ಬಳಿಕ ಜಿಲ್ಲಾಕೇಂದ್ರಕ್ಕೆ ಭೇಟಿಯಿತ್ತು ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಮಾತನಾಡಿಸಲಿದ್ದಾರೆ, ಲೋಕಲ್ ಕದನದಲ್ಲಿ ಕಮಲವನ್ನು ಅರಳಿಸಲಿದ್ದಾರೆ ಎಂಬ ಆಸೆ ಹುಸಿಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಕಾರ್ಯಕರ್ತನ ಮಾತಾಗಿದೆ. ದೆಹಲಿಗೆ ತೆರಳಬೇಕಿದ್ದರಿಂದ ಬರಲಾಗಲಿಲ್ಲ ಎಂಬ ಸಮಜಾಯಿಷಿ ಕೇಳಿಬಂದಿದ್ದರೂ ಲೋಕಲ್ ಫೈಟ್ನಲ್ಲಿ ನೂತನ ಸಂಸದ ವಿ.ಶ್ರೀ ಹುರುಪು ತುಂಬಬೇಕಿದೆ ಎಂಬುದು ಬಿಜೆಪಿಗರ ಮನದಾಳ.