ಚಾಮರಾಜನಗರ: ಆಗಾಗ್ಗೆ ದಾಳಿ ನಡೆಸಿ ಹಸು, ಕುರಿ, ನಾಯಿಗಳನ್ನು ತಿಂದು, ಗ್ರಾಮಸ್ಥರಲ್ಲಿ ಭಯವನ್ನುಂಟು ಮಾಡಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೊಮ್ಮನಹಳ್ಳಿ ಗ್ರಾಮದ ಜಮೀನುಗಳಿಗೆ ನುಗ್ಗಿ ಸಾಕು ಪ್ರಾಣಿಗಳು ಹಾಗೂ ಜನರ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಯ ಬಗ್ಗೆ ಮಾಹಿತಿಯನ್ನು ಅರಿತ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆಯ ಸೆರೆಗೆ ಕಾರ್ಯ ರೂಪಿಸಿ ಮಹಾದೇವಪ್ಪ ಎಂಬವರ ಜಮೀನಿನಲ್ಲಿ ರಾತ್ರಿ ಬೋನಿಟ್ಟು ಚಿರತೆಯನ್ನು ಸೆರೆಹಿಡಿದಿದ್ದಾರೆ.
10 ದಿನಗಳ ಹಿಂದೆ ಮಹದೇವಪ್ಪ ಅವರಿಗೆ ಸೇರಿದ ಹಸುವನ್ನು ಸಹ ಈ ಚಿರತೆ ಕೊಂದು ತಿಂದುಹಾಕಿತ್ತು. ಎರಡು ತಿಂಗಳ ಅಂತರದಲ್ಲಿ ಮಹದೇವಪ್ಪ ಅವರ ಜಮೀನಿನಲ್ಲಿ ಎರಡು ಚಿರತೆಗಳು ಸೆರೆಯಾಗಿವೆ. ಇಂದು ಬೋನಿಗೆ ಬಿದ್ದಿರುವ ಚಿರತೆಗೆ ಅಂದಾಜು 5 ವರ್ಷ ವಯಸ್ಸಿನ ಗಂಡು ಚಿರತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆರೆಯಾದ ಚಿರತೆಯನ್ನು ಮೂಲೆಹೊಳೆ ಅರಣ್ಯ ಪ್ರದೇಶದಲ್ಲಿ ಬಿಡಲಾಗುವುದು ಎಂದು ತಿಳಿದುಬಂದಿದೆ.