ಚಾಮರಾಜನಗರ : ಬಿಟ್ಕಾಯಿನ್ ಪ್ರಕರಣ (Bitcoin scam) ದೊಡ್ಡ ಹಗರಣವಾಗಿದೆ. ಇದರಿಂದ ಇಡೀ ಸರ್ಕಾರವೇ ನಡುಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ (KPCC Working President R. Dhruvanarayan) ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಬಿಟ್ಕಾಯಿನ್ ಹಗರಣದ ಬಗ್ಗೆ ತನಿಖೆಯಾಗಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಕಾಂಗ್ರೆಸ್ ಪಕ್ಷದ ನಾಯಕರು ಈ ಪ್ರಕರಣದಲ್ಲಿದ್ದರೆ ಅವರನ್ನು ಬಂಧಿಸಲಿ. ಅದನ್ನು ಬಿಟ್ಟು ಹೇಳಿಕೆಗಳನ್ನು ಕೊಡುತ್ತಾ ಕಾಲಹರಣ ಮಾಡುವುದನ್ನು ನಿಲ್ಲಿಸಲಿ ಎಂದರು.
ಪ್ರಿಯಾಂಕ್ ಖರ್ಗೆ ಪ್ರಶ್ನೆಗಳಿಗೆ ಪ್ರತಾಪ್ಸಿಂಹ ಸೂಕ್ತ ಉತ್ತರ ಕೊಡಬೇಕಿತ್ತು. ತನಿಖೆಗಾಗಿ ಅವರದ್ದೇ ಸರ್ಕಾರವನ್ನು ಒತ್ತಾಯಿಸಬೇಕಿತ್ತು. ಅದುಬಿಟ್ಟು ಎರಡು ಬಾರಿ ಸಂಸದರಾಗಿ, ಪತ್ರಕರ್ತರಾಗಿದ್ದ ಅವರು ಅಗೌರವವಾಗಿ ಮಾತನಾಡುತ್ತಿರುವುದನ್ನು ಮೊದಲು ಬಿಡಲಿ.
'ಸಿಎಂ ಶ್ವೇತಪತ್ರ ಹೊರಡಿಸಲಿ': ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ವ್ಯಾಪಕ ಹಾನಿಯಾಗಿರುವ ಬಗ್ಗೆ ಸರ್ವೇ ಮಾಡಿ, ಪರಿಹಾರ ನೀಡಬೇಕು. ಹಾನಿ ಬಗ್ಗೆ ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಬೇಕು. ಮಳೆಯಿಂದ ರಾಜ್ಯದ ಜನರು ಕಂಗಾಲಾಗಿದ್ದಾರೆ. ರಾಜ್ಯದ 19 ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿದೆ.
ವಾರ್ಷಿಕವಾಗಿ ಸರಾಸರಿ 133 ಮಿ.ಮೀ ಮಳೆಯಾಗುತ್ತಿದೆ. ಈ ಬಾರಿ 177 ಮಿಲಿ ಮೀಟರ್ಗಿಂತ ಅಧಿಕ ಮಳೆಯಾಗಿದೆ. ವಿಶೇಷವಾಗಿ ಭತ್ತ, ರಾಗಿ, ಜೋಳ, ಸೂರ್ಯಕಾಂತಿ, ಕಡಲೆಕಾಯಿ, ತರಕಾರಿ ಬೆಳೆಗಳು, ಹೂ ಬೆಳೆ ಹಾನಿಯಾಗಿ ರೈತರಿಗೆ ತುಂಬಾ ನಷ್ಟ ಉಂಟಾಗಿದೆ. ಬಹಳಷ್ಟು ಮನೆಗಳು ಕುಸಿದಿವೆ. ನಮ್ಮ ಜಿಲ್ಲೆಯಲ್ಲಿ ವ್ಯಾಪಕ ಹಾನಿಯಾಗಿದೆ. ಸರ್ಕಾರ ಇದರ ಬಗ್ಗೆ ಗಮನಹರಿಸಿಲ್ಲ ಎಂದು ಧ್ರುವನಾರಾಯಣ್ ಕಿಡಿಕಾರಿದರು.
'ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ': ರಾಜ್ಯದಲ್ಲಿ ಒಂದು ತಿಂಗಳಿನಿಂದ ಮಳೆಯಾಗುತ್ತಿದೆ. ಹವಾಮಾನ ವರದಿಯ ಪ್ರಕಾರ, ಮಳೆಯಾಗುವ ಮುನ್ಸೂಚನೆ ಇದ್ದರೂ ಕೂಡ ಸರ್ಕಾರ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೂ ಸರ್ವೇ ಕಾರ್ಯ ಪ್ರಾರಂಭವಾಗಿಲ್ಲ.
ಇದರ ಜತೆಗೆ, ಪರಿಹಾರ ಕೊಡುವ ಕೆಲಸವನ್ನೂ ಮಾಡಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಳೆ ಹಾನಿ ಸರ್ವೇ ಕಾರ್ಯ, ಪರಿಹಾರ ವಿತರಿಸುವ ಕೆಲಸ ಮಾಡುವುದಾಗಿ ಪತ್ರಿಕೆಯಲ್ಲಿ ಆಶ್ವಾಸನೆ ನೀಡಿದ್ದಾರೆ. ಆದರೆ, ಈ ಬಗ್ಗೆ ಆದೇಶ, ಸುತ್ತೋಲೆ ಯಾವುದನ್ನೂ ಹೊರಡಿಸಿಲ್ಲ ಎಂದು ಆರೋಪಿಸಿದರು.