ಚಾಮರಾಜನಗರ: ಗಣಪತಿ ನಿಮಜ್ಜನ ಮೆರವಣಿಗೆಗೆ ಅವಕಾಶ ನೀಡದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ತಲೆಹರಟೆ, ಅವಿವೇಕಿ ಎಂದು ಹಿಂದೂ ಸಂಘಟನೆ ಮುಖಂಡ ಜಗದೀಶ್ ಕಾರಂತ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ವಿದ್ಯಾಗಣಪತಿ ಮಂಡಲಿ ಪ್ರತಿಷ್ಠಾಪಿಸಿರುವ 'ಭೂ ರಕ್ಷ ಗಣಪತಿ' ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಕೆಲ ತರಹರಟೆಗಳು ಇರುತ್ತವೆ. ಅವುಗಳಿಗೆ ಕಾರ್ಯಕ್ರಮದ ಮಹತ್ವದ ಬಗ್ಗೆ ಗಂಧ-ಗಾಳಿ ಗೊತ್ತಿರುವುದಿಲ್ಲ. ತಿಳಿದುಕೊಳ್ಳುವ ಮನಸ್ಥಿತಿ, ಬುದ್ಧಿವಂತಿಕೆಯೂ ಇರುವುದಿಲ್ಲ ಎಂದು ನಿಮಜ್ಜನ ಮೆರವಣಿಗೆ ನಡೆಸಲು ಅವಕಾಶ ಕೊಡದಿದ್ದಕ್ಕೆ ಜಿಲ್ಲಾಧಿಕಾರಿ ವಿರುದ್ಧ ಕಾರಂತ್ ಕಿಡಿಕಾರಿದರು.
ಅಧಿಕಾರಿಗಳು ಅವಿವೇಕಿ ವರ್ತನೆಯನ್ನು ನಿಲ್ಲಿಸಬೇಕು. ಸರ್ಕಾರಕ್ಕೆ ಕಳಂಕ ತರಲು ಈ ರೀತಿ ಮಾಡಿದ್ದರೆ ಅದಕ್ಕೆ ಅವರೇ ಜವಾಬ್ದಾರಿ. ಗಣಪತಿ ನಿಮಜ್ಜನದ ವಿಳಂಬಕ್ಕೆ ಕಾರಣಕರ್ತರನ್ನು ಸುಮ್ಮನೆ ಬಿಡಲ್ಲ. ನಮ್ಮನ್ನು ಬಗ್ಗಿಸುವ ಕಾಲ ಇವತ್ತಿಲ್ಲ ಎಂದು ಹೇಳಿದರು.
ಗಣೇಶ ನಿಮಜ್ಜನದ ಮೆರವಣಿಗೆ ಜಿಲ್ಲಾಡಳಿತ ಅವಕಾಶ ನೀಡದ ಹಿನ್ನೆಲೆಯಲ್ಲಿ ನಿಮಜ್ಜನ ಕಾರ್ಯಕ್ರಮವನ್ನೇ ಗಣಪತಿ ಮಂಡಲಿ ಮುಂದೂಡಿದೆ. ಮೆರವಣಿಗೆಗೆ ಅವಕಾಶ ಸಿಗುವ ತನಕ ವಿಸರ್ಜಿಸಲ್ಲ ಎಂದು ಪಟ್ಟು ಹಿಡಿದಿವೆ.
ಇದನ್ನೂ ಓದಿ: ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಮಸೂದೆಗೆ ವಿರೋಧ : ಕಾಂಗ್ರೆಸ್ ಬಣ್ಣ ಬಯಲಾಗಿದೆ ಎಂದ ಸಿ.ಟಿ.ರವಿ