ಗುಂಡ್ಲುಪೇಟೆ (ಚಾಮರಾಜನಗರ) : ಪಟ್ಟಣದ ಜಾಕಿರ್ ಹುಸೇನ್ ನಗರದಲ್ಲಿ ಮಂಗಳವಾರ ರಾತ್ರಿ ಮೂವರು ಕೊಲೆಯಾದ ಸ್ಥಳಕ್ಕೆ, ದಕ್ಷಿಣ ವಲಯದ ಐಜಿ ವಿಫುಲ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.
ಕೊಲೆಯಾದ ಸ್ಥಳ, ಆಸ್ಪತ್ರೆಯಲ್ಲಿದ್ದ ಗಾಯಾಳು ಹಾಗೂ ಮರಣೋತ್ತರ ಪರೀಕ್ಷೆ ನಡೆದ ಸ್ಥಳಕ್ಕೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು. ಬಳಿಕ ಶವಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಈ ವೇಳೆ, ಮಾತನಾಡಿದ ಐಜಿ ವಿಪುಲ್ ಕುಮಾರ್ ಅವರು, ವೈಯಕ್ತಿಕ ದ್ವೇಷ, ಹಣಕಾಸಿನ ವಿಚಾರವಾಗಿ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಅನೇಕರ ಹೆಸರು ಕೇಳಿ ಬಂದಿದೆ. ಎಷ್ಟು ಬೇಗ ಸಾಧ್ಯವೋ ಅಷ್ಟರೊಳಗೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗುತ್ತದೆ ಎಂದರು. ಕೃತ್ಯ ಮಾಡಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಭವಿಷ್ಯದಲ್ಲಿ ಯಾರೂ ಸಹ ಇಂತಹ ಕೃತ್ಯಗಳನ್ನು ಮಾಡಬಾರದು ಅಂತಹ ಪಾಠ ಕಲಿಯುವಂತೆ ಮಾಡಲಾಗುತ್ತದೆ ಎಂದರು.
ಜನರು ಸಹ ತಾಳ್ಮೆಯಿಂದ ಇರಬೇಕು. ಕಾನೂನು ಕೈಗೆ ತೆಗೆದುಕೊಳ್ಳಬಾರದು. ಘಟನೆಗೆ ನಿಜವಾದ ಕಾರಣ ತನಿಖೆಯಿಂದ ಬದಲಾಗುತ್ತದೆ. ಅಲ್ಲಿಯವರೆಗೆ ಶಾಂತ ರೀತಿಯಲ್ಲಿ ವರ್ತಿಸಬೇಕು ಎಂದು ಐಜಿ ವಿಪುಲ್ ಕುಮಾರ್ ಹೇಳಿದ್ದಾರೆ.
ಇನ್ನು ಎಸ್ಪಿ ಎಚ್. ಡಿ. ಆನಂದ್ ಕುಮಾರ್ ಮಾತನಾಡಿ, ಎರಡು ತಂಡಗಳ ನಡುವೆ ಜಗಳವಾಗಿ ಒಂದು ತಂಡದವರು ಮಾರಕಾಸ್ತ್ರಗಳಿಂದ ಇದ್ರಿಸ್, ಕೈಸರ್, ಜಕ್ಕಾವುಲ್ಲಾ ಮತ್ತು ನುಸ್ರುಲ್ಲಾ ಹಾಗೂ ಇತರ ನಾಲ್ಕು ಜನರ ಮೇಲೆ ದಾಳಿ ಮಾಡಿದ್ದಾರೆ. ಸ್ಥಳದಲ್ಲಿ ಒಬ್ಬ ಹಾಗೂ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದರು. ಐವರನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಲಾಯಿತು. ಇದರಲ್ಲಿ ಇಬ್ಬರ ಸ್ಥಿತಿ ಚಿಂತಜನಕವಾಗಿದ್ದು, ಉಳಿದ ಮೂವರು ಪ್ರಾಣಾಯದಿಂದ ಪಾರಾಗಿದ್ದಾರೆ ಎಂದರು.
ತನಿಖೆ ಪ್ರಗತಿಯಲ್ಲಿದ್ದು ಒಬ್ಬನನ್ನು ದಸ್ತಗಿರಿ ಮಾಡಲಾಗಿದೆ. ಉಳಿದವರನ್ನು ದಸ್ತಗಿರಿ ಮಾಡಲು ಕ್ರಮ ಜಾರಿಯಲ್ಲಿದೆ ಎಂದರು. ಎರಡು ತಂಡಗಳ ನಡುವೆ ಜಗಳವಾಗಿದ್ದರೂ ಹೆಚ್ಚು ಜನರು ಸತ್ತಿರುವವರ ಕಡೆಯಿಂದ ಪ್ರಕರಣ ದಾಖಲಿಸಿಕೊಂಡು 307, 302 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ವಿವಿಧ ತಂಡಗಳನ್ನು ರಚನೆ ಮಾಡಿ ಆರೋಪಿಗಳನ್ನು ಬಂಧಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.