ಕೊಳ್ಳೇಗಾಲ (ಚಾಮರಾಜನಗರ) : ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ದಲಿತ, ಕಾರ್ಮಿಕ, ಐಕ್ಯ ಸಂಘಟನೆಗಳು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ, ಪಿಎಂ ಮೋದಿ ವೇಷಧರಿಸಿ ರೈತನ ಎದೆ ಮೇಲೆ ಕಲ್ಲು ಇಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು. ರೈತರ ಬೃಹತ್ ಪ್ರತಿಭಟನೆಗೆ ಶಾಸಕ ಎನ್ ಮಹೇಶ್ ಕೂಡ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ಸಮಗ್ರವಾಗಿ ಮಾತನಾಡಲು ಸದನದಲ್ಲಿ ಅವಕಾಶ ನೀಡಲಿಲ್ಲ. ಆದರೆ, ಸಿಕ್ಕ ಸಮಯದಲ್ಲಿ ತಿದ್ದುಪಡಿ ಕಾಯ್ದೆಗಳಿಂದ ರೈತರಿಗಿರುವ ಅನಾನುಕೂಲದ ಬಗ್ಗೆ ಮಾತನಾಡಿದ್ದೇನೆ. ಜಾಗತೀಕರಣ, ಖಾಸಗೀಕರಣ, ಉದಾರೀಕರಣದ ಫಲ ಈ ರೈತ ವಿರೋಧಿ ಕಾಯ್ದೆಗಳ ಬಲವಾಗಿದೆ. ಮುಂದಿನ ಅಧಿವೇಶನದಲ್ಲಿ ರೈತರ ಪರ ಹೆಚ್ಚು ಹೋರಾಟ ಮಾಡುತ್ತೇನೆ ಎಂದರು.
![Farmers protest in Kollegala oppose to agriculture bills](https://etvbharatimages.akamaized.net/etvbharat/prod-images/kn-cnr-kollegal-prathibatane-av-avb-kac10017_28092020133650_2809f_1601280410_790.jpg)
ಪ್ರತಿಭಟನೆಯಲ್ಲಿ ಗೊಂದಲ : ಕಲಾಪ ವೇಳೆ ಮಾತನಾಡಲು ಹೆಚ್ಚು ಸಮಯಾವಕಾಶ ಸಿಗಲಿಲ್ಲ ಎಂಬ ಶಾಸಕ ಎನ್.ಮಹೇಶ್ ಮಾತಿಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಎ ಆರ್ ಕೃಷ್ಣಮೂರ್ತಿ, ಮಹೇಶ್ ಅವರು ವಿರೋಧ ಪಕ್ಷದಲ್ಲಿ ಇದ್ದಿದ್ದರೆ ಸದನದಲ್ಲಿ ಮಾತನಾಡಲು ಹೆಚ್ಚು ಕಾಲಾವಕಾಶವಿರುತ್ತಿತ್ತು. ಆದರೆ, ಸ್ವತಂತ್ರ ಅಭ್ಯರ್ಥಿಯಾಗಿರುವುದರಿಂದ ಯಾವುದೇ ಮಾನ್ಯತೆ ಇಲ್ಲ ಎಂದರು. ಈ ವೇಳೆ ಗೊಂದಲ ಏರ್ಪಟ್ಟು ಮಾಜಿ ಹಾಗೂ ಹಾಲಿ ಶಾಸಕರ ಬೆಂಬಲಿಗರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.