ಚಾಮರಾಜನಗರ: ದೀಪಾವಳಿ ಬಂತೆಂದರೆ ಸಡಗರ-ಸಂಭ್ರಮ, ಚಿಣ್ಣರಿಗೆ ಪಟಾಕಿ ಹಚ್ಚುವ ಖುಷಿ, ಹಿರಿಯರಿಗೆ ದೀಪ ಬೆಳುಗುವ ಸಂತಸ. ಆದರೆ ಸೋಮವಾರ ದೇಶಾದ್ಯಂತ ಆಚರಿಸುವ ಸಂಭ್ರಮದ ಬೆಳಕಿನ ಹಬ್ಬ ಬುಧವಾರ ಬಂದರೆ ಮಾತ್ರ ಚಾಮರಾಜನಗರ ಜಿಲ್ಲೆಯ ಈ 6 ಗ್ರಾಮಗಳು ಆಚರಿಸುತ್ತವೆ.
ಹೌದು, ಬೆಳಕಿನ ಹಬ್ಬವಾದ ದೀಪಾವಳಿ ಕೊರೊನಾ ನಡುವೆಯೂ ದೇಶದೆಲ್ಲೆಡೆ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದೆ. ಆದರೆ ಗುಂಡ್ಲುಪೇಟೆ ತಾಲೂಕಿನ 6 ಗ್ರಾಮಗಳಲ್ಲಿ ಹಬ್ಬದ ಸಂತಸವೇ ಇಲ್ಲ. ಕಾರಣ ಈ ಬಾರಿ ಹಬ್ಬ ಸೋಮವಾರ ಬಂದಿರುವುದು. ಗುಂಡ್ಲುಪೇಟೆ ತಾಲೂಕಿನ ವೀರನಪುರ, ಬನ್ನಿತಾಳಪುರ, ಇಂಗಲವಾಡಿ, ಮಾಡ್ರಹಳ್ಳಿ, ಮಳವಳ್ಳಿ ಹಾಗೂ ನೇನೆಕಟ್ಟೆ ಗ್ರಾಮಗಳಲ್ಲಿ ದೀಪಾವಳಿಯ ಬಲಿ ಪಾಡ್ಯಮಿ ಬುಧವಾರ ಬಂದರೆ ಮಾತ್ರ ಹಬ್ಬ ಆಚರಿಸಲಿದ್ದು, ಇಲ್ಲದಿದ್ದರೆ ಮುಂದಿನ ಬುಧವಾರವೇ ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ.
ದೀಪಾವಳಿ ಹಬ್ಬದ ಸಂಭ್ರಮ, ಹೊಸ ಬಟ್ಟೆ ತೊಡುವುದು, ಪಟಾಕಿ ಸಿಡಿಸುವುದು, ಮನೆಯಲ್ಲಿ ಸಿಹಿ ಊಟ ಎಲ್ಲವೂ ಬುಧವಾರವೇ ನಡೆಯಲಿದ್ದು, ಕಳೆದ ಮೂರು ತಲೆಮಾರುಗಳಿಂದ ಈ ಆರು ಗ್ರಾಮದವರು ಬುಧವಾರವೇ ಹಬ್ಬ ಆಚರಿಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ.
ಕಾರಣ ಏನು:!?
ಅಷ್ಟಕ್ಕೂ ಬುಧವಾರವೇ ಏಕೆ ಈ ಆರು ಗ್ರಾಮಗಳು ದೀಪಾವಳಿ ಮಾಡಲಿವೆ ಎಂಬ ಕುತೂಹಲಕ್ಕೆ ಉತ್ತರ ಗ್ರಾಮಸ್ಥರಲ್ಲಿ ಮನೆ ಮಾಡಿರುವ ಆತಂಕ. ಬುಧವಾರ ಹೊರತುಪಡಿಸಿ ಹಬ್ಬ ಆಚರಿಸಿದರೆ ಏನಾದರೂ ಕೆಡಕಾಗಬಹುದು, ದನಗಳಿಗೆ ಏನಾದರೂ ತೊಂದರೆ ಆಗಬಹುದು ಎಂಬ ಆತಂಕದಿಂದ ಈ ನಿರ್ಧಾರಕ್ಕೆ ಬಂದಿದ್ದಾರಂತೆ ಗ್ರಾಮಸ್ಥರು.
ಈ ಕುರಿತು ಬನ್ನಿತಾಳಪುರದ ಮುಖಂಡ ಮಹೇಶ್ ಮಾತನಾಡಿ, ತಲೆಮಾರುಗಳ ಹಿಂದೆ ಒಮ್ಮೆ ಬುಧವಾರ ಹೊರತುಪಡಿಸಿ ಹಬ್ಬ ಆಚರಿಸಿದಾಗ ಏರಿಗೆ ಕಟ್ಟಿದ ಎತ್ತುಗಳಿಗೆ ಅನಾರೋಗ್ಯ ಉಂಟಾದ ನಿದರ್ಶನವಿರುವುದರಿಂದ ಹಿಂದಿನವರು ಹಾಕಿಕೊಟ್ಟ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ನಾವು ಆರು ಗ್ರಾಮದವರು ಒಂದೇ ದಿನ ಹಬ್ಬ ಆಚರಿಸಲಿದ್ದು, ಇದು ಮುಂದೆಯೂ ಕೂಡ ಪಾಲನೆಯಾಗಲಿದೆ. ಲೋಕವೆಲ್ಲಾ ಹಬ್ಬದ ದಿನವೇ ಬೆಳಕಿನ ಹಬ್ಬ ಆಚರಿಸಿದರೆ ನಾವು ಬುಧವಾರ ಆಚರಿಸುತ್ತೇವೆ ಎಂದರು.
ಇನ್ನು ವೀರನಪುರದ ಗುರುಪ್ರಸಾದ್ ಮಾತನಾಡಿ, ಗ್ರಾಮಗಳ ಬುಧವಾರದ ಭಕ್ತಿ ದೀಪಾವಳಿಗೆ ಸೀಮಿತವಾಗದೆ ಯುಗಾದಿಗೂ ಅನ್ವಯಿಸುತ್ತದೆ. ಯುಗಾದಿ ಹಬ್ಬವನ್ನು ಬುಧವಾರವೇ ಆಚರಿಸಲಿದ್ದು, ಮಾರಿಹಬ್ಬವನ್ನು ಶನಿವಾರವೇ ಆಚರಿಸುವುದು ರೂಢಿಗವಾಗಿದೆ. ಬೇರೆ ದಿನಗಳಲ್ಲಿ ಹಬ್ಬ ಬಂದರೂ ನಮ್ಮ 6 ಗ್ರಾಮಗಳ ಜನರು ಬುಧವಾರವೇ ಆಚರಿಸುತ್ತೇವೆ. ಅದರಂತೆ ಮುಂದಿನ ಬುಧವಾರವೇ ಈ 6 ಗ್ರಾಮಗಳಲ್ಲಿ ಬೆಳಕಿನ ಹಬ್ಬ ಎಂದು ಮಾಹಿತಿ ನೀಡಿದರು.