ಚಾಮರಾಜನಗರ: ಚುನಾವಣೆ ರಂಗೇರುತ್ತಿದ್ದಂತೆ ಪಕ್ಷದಿಂದ ಪಕ್ಷ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿದ್ದರಾಮಯ್ಯ ಆಪ್ತ ಚಿನ್ನಸ್ವಾಮಿ ಬಳಿಕ ಎಚ್.ಸಿ.ಮಹದೇವಪ್ಪ ಆಪ್ತ ಕಿನಕನಹಳ್ಳಿ ರಾಚಯ್ಯ ಮತ್ತು ಪುಟ್ಟರಂಗಶೆಟ್ಟಿ ಬಲಗೈ ಬಂಟ ವೈ.ಕೆ.ಮೋಳೆ ರಾಜು ಕೈ ತೊರೆದಿದ್ದಾರೆ.
ನಿವೃತ್ತ ಸರ್ಕಾರಿ ಅಧಿಕಾರಿಯಾಗಿರುವ ರಾಚಯ್ಯ ಎಚ್. ಮಾಜಿ ಸಿಎಂ ಅತ್ಯಾಪ್ತರಲ್ಲಿ ಒಬ್ಬರಾಗಿದ್ದರು ಹಾಗೂ ಸಿದ್ದರಾಮಯ್ಯ ಶಿಷ್ಯ ಎಂದೆನಿಸಿಕೊಂಡಿದ್ದರು. ಈಗ, ಕೈ ತೊರೆದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಕಮಲ ಮುಡಿದಿದ್ದಾರೆ.
ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದ ಕೈ ಟಿಕೆಟ್ಗೆ ಪ್ರಬಲ ಆಕಾಂಕ್ಷಿಯಾಗಿ ತೀವ್ರ ಪೈಪೋಟಿ ನಡೆಸಿದ್ದರು. ಟಿಕೆಟ್ ಸಿಗದ ಅಸಮಾಧನದಿಂದಲೇ ಬಿಜೆಪಿ ಸೇರಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
ಕೊಳ್ಳೇಗಾಲದಲ್ಲಿ ತನ್ನದೇ ಆದ ಮತ ಕ್ರೋಢೀಕರಿಸಿರುವ ರಾಚಯ್ಯ ಬಿಜೆಪಿಗೆ ಪ್ಲಸ್ ಆಗುವರೋ ಇಲ್ಲಾ ಮೈನಸ್ ಆಗುವರೋ ಕಾದು ನೋಡಬೇಕಿದೆ.
ಇನ್ನು ಉಪ್ಪಾರ ಸಮುದಾಯದ ಯುವ ಮುಖಂಡ ಹಾಗೂ ಸಚಿವ ಪುಟ್ಟರಂಗಶೆಟ್ಟಿ ಬಲಗೈ ಬಂಟ ವೈ.ಕೆ.ಮೋಳೆ ರಾಜು ಅವರು ಕೂಡ ಇಂದು ಸಂತೆಮರಹಳ್ಳಿಯಲ್ಲಿ ನಡೆಯುವ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಮಲ ಮುಡಿಯುವರು ಎಂದು ಮೂಲಗಳು ಖಚಿತ ಪಡಿಸಿದೆ.