ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಅಕ್ಟೋಬರ್ 12ರಂದು ವಿಶ್ವವಿಖ್ಯಾತ ಮೈಸೂರು ದಸರಾದ ಅದ್ಧೂರಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ನವರಾತ್ರಿಯ ಕೊನೆಯ ದಿನ ವಿಜಯದಶಮಿಯಂದು ಐತಿಹಾಸಿಕ ಮೆರವಣಿಗೆ ನಡೆಯುತ್ತದೆ.
ಬೆಳಗ್ಗೆ ಅರಮನೆಯಲ್ಲಿ ವಿಜಯದಶಮಿ ಕಾರ್ಯಕ್ರಮಗಳನ್ನು ರಾಜವಂಶಸ್ಥರು ನಡೆಸಿದ ಬಳಿಕ ಮಧ್ಯಾಹ್ನ 1.44ರಿಂದ 2.10ರ ಶುಭ ಮಕರ ಲಗ್ನದಲ್ಲಿ ಅರಮನೆ ಪಕ್ಕದ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಾಲಯದ ಬಳಿಯಲ್ಲಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಹಾಗೂ ಗಣ್ಯರು ಪೂಜೆ ಸಲ್ಲಿಸಿದ ಬಳಿಕ ವಿಜಯದಶಮಿ ಮೆರವಣಿಗೆಗೆ ಚಾಲನೆ ದೊರೆಯಲಿದೆ.
ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ: ಆ ಬಳಿಕ ನಾಡಿನ ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಬಿಂಬಿಸುವ ಸುಮಾರು 51 ಸ್ತಬ್ಧಚಿತ್ರಗಳು ಹಾಗೂ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಯಿಂದ 4.30ರ ಶುಭ ಕುಂಭಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಗಣ್ಯರು 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ಸರ್ವಾಲಂಕಾರ ಭೂಷಿತೆ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿ ಪ್ರಾರಂಭವಾಗಲಿದೆ.
ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಆನೆಯೊಂದಿಗೆ ಗಜಪಡೆ ಅರಮನೆಯಿಂದ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ ಹೆಚ್ಚು ದೂರ ಸಾಗಿ ಬರಲಿದೆ. ಮೆರವಣಿಗೆಯಲ್ಲಿ ಆಕರ್ಷಕ ಸ್ತಬ್ದಚಿತ್ರಗಳು, ಕಲಾತಂಡ ಜೊತೆಗೆ ಕರ್ನಾಟಕ ಪೊಲೀಸ್ ವಾದ್ಯ ತಂಡ, ಅಶ್ವದಳ, ಎನ್.ಸಿ.ಸಿ, ಕೆಎಸ್ಆರ್ಪಿ ತುಕಡಿಗಳು ಇರಲಿವೆ.
ಜಂಬೂಸವಾರಿ ಮೆರವಣಿಗೆ ಅರಮನೆಯಿಂದ ಹೊರಟು ಅರಮನೆಯ ಉತ್ತರ ದ್ವಾರ, ಕೆ.ಆರ್.ಸರ್ಕಲ್, ಸಯ್ಯಾಜಿರಾವ್ ರಸ್ತೆ, ಬೂಂಬು ಬಜಾರ್, ಹೈವೇ ಸರ್ಕಲ್ ಮೂಲಕ ಬನ್ನಿಮಂಟಪ ತಲುಪುತ್ತದೆ.
ಪಂಜಿನ ಕವಾಯತಿ: ಸಂಜೆ 7 ಗಂಟೆಗೆ ಆಕರ್ಷಕ ಪಂಜಿನ ಕವಾಯತು ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಂಜಿನ ಕವಾಯತು ವೀಕ್ಷಿಸಿ, ವಂದನೆ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: ಮೈಸೂರು: ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧಪೂಜೆ ನೆರವೇರಿಸಿದ ಯದುವೀರ್