ಚಾಮರಾಜನಗರ: ಮೊದಲ ಬಾರಿಗೆ ರೇಷ್ಮೆ ಕೃಷಿ ಮೂಲಕ ಬಂಪರ್ ಆದಾಯ ಗಳಿಸಿರುವ ಯುವ ರೈತ ಯಾವ ಟೆಕ್ಕಿಗೂ ಕಡಿಮೆ ಇಲ್ಲದಂತೆ ಮೊದಲ ತಿಂಗಳಿಗೆ 94 ಸಾವಿರ ರೂ. ಆದಾಯ ಗಳಿಸಿದ್ದು, ಎರಡನೇ ತಿಂಗಳು ಲಕ್ಷ ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ರಾಘವಪುರ ಗ್ರಾಮದ ಮಣಿ ಎಂಬುವರ ಮಗ ಷಣ್ಮುಗಂ (36) ಮೊದಲ ಬಾರಿಗೆ ರೇಷ್ಮೆ ಕೃಷಿ ಕೈಗೊಂಡು 28 ದಿನಕ್ಕೆ 90 ಸಾವಿರಕ್ಕೂ ಹೆಚ್ಚು ಲಾಭ ಗಳಿಸಿದ್ದಾರೆ. ಈಗಾಗಲೇ, ಒಂದೆರೆಡು ದಿನಗಳಲ್ಲಿ ಎರಡನೇ ತಿಂಗಳಿನ ರೇಷ್ಮೆಗೂಡು ತಯಾರಾಗಲಿದ್ದು ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚಿನ ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ತಮ್ಮ 4 ಎಕರೆ ಜಮೀನಿನಲ್ಲಿ ಮೊದಲ ಬಾರಿಗೆ ಇವರು ರೇಷ್ಮೆ ಕೃಷಿ ಕೈಗೊಂಡಿದ್ದು ಬಯೋಟೆನ್ ಎಂಬ ರೇಷ್ಮೆ ತಳಿಯನ್ನು ಬೆಳೆಯುತ್ತಿದ್ದಾರೆ. ರೇಷ್ಮೆ ಬಗ್ಗೆ ಅನುಭವವೇ ಇಲ್ಲದೇ ಅವರಿವರ ಮಾರ್ಗದರ್ಶನ ಪಡೆದು ಉತ್ತಮ ಗೂಡನ್ನೇ ಪಡೆದಿದ್ದು ಇನ್ನೊಂದು ವರ್ಷದಲ್ಲಿ ರೇಷ್ಮೆಗೂಡು ಕೆಜಿಗೆ 300 ರೂ.ಗೆ ಹೋದರೂ 10 ಲಕ್ಷ ರೂ. ಸಂಪಾದಿಸುತ್ತೇನೆ, ಈಗ ಪ್ರತಿ ಕೆಜಿಗೆ 500-600 ರೂ. ಇದ್ದು ಈ ತಿಂಗಳು ಲಕ್ಷ ರೂ. ಬರುವುದು ಪಕ್ಕಾ ಎಂದು ಈಟಿವಿ ಭಾರತದೊಂದಿಗೆ ವಿಶ್ವಾಸ ವ್ಯಕ್ತಪಡಿಸಿದರು.
ರೇಷ್ಮೆ ಕೃಷಿ ಪ್ರತಿ ತಿಂಗಳು ಆದಾಯ ತಂದುಕೊಡಲಿದ್ದು ಅತಿ ಜಾಗರೂಕತೆಯಿಂದ ಬೆಳೆ ಮತ್ತು ಮರಿಗಳನ್ನು ನೋಡಿಕೊಳ್ಳಬೇಕು. ನನಗೆ ಈ ಕೃಷಿ ಆದಾಯದ ಭರವಸೆ ಮೂಡಿಸಿದ್ದು, ಮತ್ತಿನ್ನೆರೆಡು ಎಕರೆಗೂ ರೇಷ್ಮೆ ಕೃಷಿ ವಿಸ್ತರಿಸುತ್ತೇನೆ ಎಂದು ಷಣ್ಮುಗಂ ತಿಳಿಸಿದರು.
ಚಾಮರಾಜನಗರ ಜಿಲ್ಲೆ ಈ ಹಿಂದೆ ರೇಷ್ಮೆಗೆ ಪ್ರಖ್ಯಾತವಾಗಿತ್ತು. ಆದರೆ, ಚೀನಾ ಸಿಲ್ಕ್ನಿಂದಾಗಿ ರೇಷ್ಮೆಯಿಂದ ಜಿಲ್ಲೆಯ ಬಹುಪಾಲು ರೈತರು ವಿಮುಖಗೊಂಡಿದ್ದರು. ಆದರೆ, ಈಗ ಈ ಯುವ ರೈತನ ಆದಾಯ ಜಿಲ್ಲೆಯ ರೇಷ್ಮೆ ಕೃಷಿಗೆ ಮತ್ತಷ್ಟು ಭರವಸೆ ಮೂಡಿಸಿದೆ.