ಚಾಮರಾಜನಗರ: ಅತೀವ ಆಸಕ್ತಿ, ಶ್ರದ್ಧೆ ಇದ್ದರೇ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಖಗೋಳ ಪ್ರೇಮಿ ಯುವಕನೇ ನಿದರ್ಶನ. ಪುಸ್ತಕ ಸಹಾಯದಿಂದ ಸ್ವತಃ ಟೆಲಿಸ್ಕೋಪ್ ಅನ್ನು ತಯಾರಿಸಿ ಖಗೋಳ ವೀಕ್ಷಣೆ ಮಾಡುತ್ತಿದ್ದಾರೆ.
ಹೌದು, ಚಾಮರಾಜನಗರದ ಡಿಪ್ಲೊಮ ಪದವೀಧರ ಭರತ್(29 ವರ್ಷ) ಎಂಬವರು ದುಬಾರಿ ಟೆಲಿಸ್ಕೋಪ್ ಕೊಳ್ಳಲು ಆರ್ಥಿಕ ಶಕ್ತಿ ಇಲ್ಲದ ಕಾರಣ ಸ್ವತಃ ದೂರದರ್ಶಕ ತಯಾರು ಮಾಡಿದ್ದು, ನಿತ್ಯ ಖಗೋಳ ವೀಕ್ಷಣೆ ಮಾಡುವ ಮೂಲಕ ತಮ್ಮ ವಿಜ್ಞಾನಾಸಕ್ತಿಯನ್ನು ತಣಿಸಿಕೊಳ್ಳುತ್ತಿದ್ದಾರೆ.
ವಿಜ್ಞಾನಿ ಪಿ.ಎನ್.ಶಂಕರ್ ಬರೆದಿರುವ "ಹೌ ಟು ಬಿಲ್ಡ್ ಟೆಲಿಸ್ಕೋಪ್" ಎಂಬ ಪುಸ್ತಕ ಓದಿಕೊಂಡು ಜೊತೆಗೆ ಫೋನ್ ಕರೆಗಳ ಮೂಲಕ ಹಲವರಿಂದ ಸಲಹೆ ಪಡೆದು ಮೊದಲ ಪ್ರಯತ್ನದಲ್ಲೇ ಟೆಲಿಸ್ಕೋಪ್ ತಯಾರಿಸಿದ್ದಾರೆ. ಇವರು ತಯಾರಿಸುವ ಟೆಲಿಸ್ಕೋಪ್ 8 ಇಂಚು ವ್ಯಾಸದ ನಿಮ್ನ ದರ್ಪಣ ಹೊಂದಿದ್ದು 8.1 ಪೋಕಲ್ ಅನುಪಾತದ 1,660 ಮಿ.ಮೀ. ಪೋಕಲ್ ಲೆಂತ್ ಹೊಂದಿದ್ದು ಇಷ್ಟು ದೊಡ್ಡ ದೂರದರ್ಶಕವನ್ನು ಖರೀದಿ ಮಾಡಲು 70-80 ಸಾವಿರ ಬೇಕಾಗಲಿದೆ. ಆದರೆ, ಸ್ವತಃ ಭರತ್ ಅವರೇ ಟೆಲಿಸ್ಕೋಪ್ ಕಿಟ್ ಸಹಾಯದಿಂದ ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಅಂದಾಜು 20 ಸಾವಿರ ರೂ. ಖರ್ಚು ಮಾಡಿ ದೂರದರ್ಶಕ ತಯಾರಿ ಮಾಡಿದ್ದಾರೆ.
ಏನೆಲ್ಲ ವೀಕ್ಷಣೆ ಮಾಡುತ್ತಾರೆ ಭರತ್..? ಟೆಲಿಸ್ಕೋಪ್ ಮೂಲಕ ಸೌರಮಂಡಲದ ಎಲ್ಲ ಗ್ರಹಗಳು, ಉಪ ಗ್ರಹಗಳು, ಚಂದ್ರ ಗ್ರಹಣಗಳನ್ನು ಭರತ್ ಕಣ್ತುಂಬಿಕೊಂಡಿದ್ದಾರೆ. ಜೊತೆಗೆ, ಅಕ್ಕಪಕ್ಕದ ಮನೆಗಳ ಮಕ್ಕಳಿಗೆ, ತಮ್ಮ ಮನೆಯವರಿಗೂ ಗ್ರಹಗಳ ದರ್ಶನ ಮಾಡಿಸಿದ್ದಾರೆ.
ಸೌರಮಂಡಲದ ಅತಿ ದೊಡ್ಡ ಗ್ರಹ ಗುರು, ಶನಿ ಗ್ರಹದ ಸುತ್ತಲಿನ ಉಂಗುರ, ನಕ್ಷತ್ರ ಪುಂಜಗಳು, ಚಂದ್ರ ಹೀಗೆ ಖಗೋಳದ ವೀಕ್ಷಣೆಗೆ ಭರತ್ ಅವರ ಮನೆಯೇ ಪ್ರಯೋಗಾಲಯವಾಗಿದೆ. 8 ನೇ ತರಗತಿಯಲ್ಲಿ ಅಬ್ದುಲ್ ಕಲಾಂ ಅವರು ಸುತ್ತೂರಿಗೆ ಭೇಟಿ ನೀಡಿದ್ದ ವೇಳೆ ಸಣ್ಣದೊಂದು ಟೆಲಿಸ್ಕೋಪ್ ತಯಾರಿಸಿ ಪ್ರದರ್ಶನವನ್ನು ಮಾಡಿದ್ದರು ಭರತ್.
50 ತಾಸು ತೆಗೆದುಕೊಂಡಿರುವ ಭರತ್: ಕೋವಿಡ್ ಎರಡನೇ ಅಲೆಯ ಸಮಯವನ್ನು ಭರತ್ ಸದುಪಯೋಗ ಮಾಡಿಕೊಂಡಿದ್ದು, ತಾಳ್ಮೆ, ಪರಿಶ್ರಮದ ಮೂಲಕ ಈ ಟೆಲಿಸ್ಕೋಪ್ ತಯಾರಿಸಿದ್ದಾರೆ. ದೂರದರ್ಶನದ ಪ್ರಮುಖ ಭಾಗವಾದ ಪ್ರೈಮರಿ ಮಿರರ್ ಗಾಜನ್ನು ಉಜ್ಜಿ ತಯಾರು ಮಾಡಬೇಕಿದ್ದು ಪರಿಣಿತರು ಮಾಡುವ ಕೆಲಸವನ್ನು ಭರತ್ ಶ್ರದ್ಧೆ ವಹಿಸಿ ತಾವೇ ಮಾಡಿದ್ದಾರೆ.
ಈ ಬಗ್ಗೆ ಭರತ್ ಪ್ರತಿಕ್ರಿಯೆ ನೀಡಿದ್ದು, 'ಹೌ ಟು ಬಿಲ್ಡ್ ಟೆಲಿಸ್ಕೋಪ್' ಎಂಬ ಪುಸ್ತಕ ಓದಿಕೊಂಡು ಅಮೆಚೂರ್ ಟೆಲಿಸ್ಕೋಪ್ ಮೇಕರ್ಸ್ ಎಂಬ ಫೇಸ್ ಬುಕ್ ಪೇಜಿನ ಕೆಲ ಪರಿಣಿತರ ಸಲಹೆ ಪಡೆದು ದೂರವಾಣಿ ಮೂಲಕ ಮಾರ್ಗದರ್ಶನ ಪಡೆದು ಈ ದೂರದರ್ಶಕ ರೆಡಿ ಮಾಡಿದ್ದೇನೆ. ಮೊದಲ ಪ್ರಯತ್ನದಲ್ಲೇ ಟೆಲಿಸ್ಕೋಪ್ ಪೂರ್ಣಪ್ರಮಾಣದಲ್ಲಿ ಸಮರ್ಪಕವಾಗಿ ಕೆಲಸ ಮಾಡಿದ್ದು ಖುಷಿ ತಂದಿದೆ ಎಂದು ಭರತ್ ಹೇಳಿದ್ದಾರೆ.
ಭರತ್ ಕಾರ್ಯಕ್ಕೆ ತಾಯಿ ಖುಷ್: ಭರತ್ ಕಾರ್ಯಕ್ಕೆ ಅವರ ತಾಯಿ ನಿರ್ಮಲಾ ಖುಷಿಯಾಗಿದ್ದು, ಮದುವೆ ಮನೆಯಲ್ಲಿ ಸುಮ್ಮನೆ ಅರುಂಧತಿ ನಕ್ಷತ್ರ ತೋರಿಸುತ್ತಾರೆ. ಆದರೆ, ನನ್ನ ಮಗ ನಿಜವಾಗಿಯೂ ನನಗೆ ಆ ನಕ್ಷತ್ರ ತೋರಿಸಿದ. ಎಲ್ಲ ಮಕ್ಕಳು ಇತರ ಆಟಗಳನ್ನು ಆಡಿದರೇ, ನನ್ನ ಮಗ ಭರತ್ ವಿಜ್ಞಾನದ ಚಟುವಟಿಕೆ ಮೂಲಕವೇ ಆಟಗಳನ್ನು ಆಡುತ್ತಿದ್ದ, ಇನ್ನೂ ಆತ ಹೆಚ್ಚಿನ ಸಾಧನೆ ಮಾಡಲಿ ಎಂಬುದು ನನ್ನಾಸೆ ಎಂದು ಆಶೀರ್ವದಿಸಿದ್ದಾರೆ.
ಇನ್ನು, ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ವಾಣೀಜ್ಯೆತರ ಉದ್ದೇಶ, ವೈರ್ಲೆಸ್ ಪ್ರಯೋಗಗಳಿಗೆ, ತುರ್ತು ಸಂದರ್ಭದಲ್ಲಿ ಸಂದೇಶ ರವಾನಿಸಲು ಹ್ಯಾಮ್ ರೇಡಿಯೋ ಪರವಾನಗಿಯನ್ನು ಪಡೆಯುವ ಮೂಲಕ ಭರತ್ ಗಮನ ಸೆಳೆದಿದ್ದಾರೆ. ಈ ಗ್ರಾಮೀಣ ಪ್ರತಿಭೆಗೆ ವಿಜ್ಞಾನಿಗಳು, ಸರ್ಕಾರ ಪ್ರೋತ್ಸಾಹಿಸಿದರೇ ಇವರ ಖಗೋಳಾಸಕ್ತಿ ಇನ್ನಷ್ಟು ಎತ್ತರಕ್ಕೆ ಏರಲಿದೆ.
ಇದನ್ನೂ ಓದಿ: ಗುಲಬರ್ಗಾ ವಿವಿ ಘಟಿಕೋತ್ಸವ: ಬಡತನದ ನಡುವೆ 6 ಚಿನ್ನದ ಪದಕ ಪಡೆದ ಗ್ರಾಮೀಣ ಪ್ರತಿಭೆ ಲಕ್ಷ್ಮೀ