ಚಾಮರಾಜನಗರ: ಅಂದು ರಾಮ ಬಿಟ್ಟ ಬಾಣಕ್ಕೆ ಎರಡಾಯ್ತು ಆ ಬೆಟ್ಟ. ಮರ್ಯಾದಾ ಪುರುಷೋತ್ತಮ ಬಂದು ಹೋದ ಕುರುಹಾಗಿ ಉಳಿಯಿತು ಆತನ ಮಂಡಿ ಗುರುತು. ಇಂದಿಗೂ ಅಲ್ಲಿ ಬೇಡಿದ್ದನ್ನ ಕರುಣಿಸುತ್ತಿದ್ದಾನಂತೆ ದಶರಥ ಪುತ್ರ. ತಲೆ ಮರೆಯಾಗಿದ್ದು, ಈಗ ತಲಮಲೈಯಾಗಿ ಉಳಿದಿದೆ. ಅಚ್ಚ ಕನ್ನಡಿಗರ ಪ್ರದೇಶವಾದರೂ ಅದು ಸೇರಿದ್ದು, ತಮಿಳುನಾಡು ರಾಜ್ಯಕ್ಕೆ. ಹೌದು, ಅಲ್ಲಿ ಶ್ರೀರಾಮಚಂದ್ರನ ಗುಡಿಯಿದೆ. ಆತನ ಮಂಡಿ ಗುರುತು ಇನ್ನೂ ಅಚ್ಚಳಿಯದೇ ಉಳಿದಿದೆ. ತನ್ನ ಬಳಿಗೆ ಬಂದ ಭಕ್ತರಿಗೆ ಅಭಯ ನೀಡುತ್ತಾ, ಬೇಡಿದ್ದನ್ನ ನೀಡುತ್ತಿದ್ದಾನೆ ಎಂಬುದು ಅಲ್ಲಿನ ಜನರ ನಂಬಿಕೆ.

ಗಡಿ ಜಿಲ್ಲೆ ಚಾಮರಾಜನಗರಕ್ಕೆ ಹೊಂದಿಕೊಂಡಂತಿರುವ ಪಕ್ಕದ ತಮಿಳುನಾಡಿನ ತಾಳವಾಡಿಯಿಂದ 10 ನಿಮಿಷದ ಹಾದಿಯಲ್ಲಿಯಲ್ಲಿದೆ ಮರ್ಯಾದ ಪುರುಷನ ಕುರುಹು ರಾಮರ ಪಾದ. ಶ್ರೀರಾಮ ಚಂದ್ರ ತನ್ನ ವನವಾಸ ಕಾಲದಲ್ಲಿ ಒಂದು ದಿನ ಅಲ್ಲಿ ತಂಗಿ ಹೊರಡುವ ವೇಳೆ ಎದುರಾದ ತಲ ಎಂಬ ರಾಕ್ಷಸನನ್ನು ಸಂಹರಿಸಲು ಹೂಡಿದ ಬಾಣ, ಆತನ ತಲೆಯನ್ನ ಹೊತ್ತು ಹೋಗುವಾಗ ಅಡ್ಡ ಸಿಕ್ಕ ಬೆಟ್ಟವನ್ನ ಸೀಳಿದೆ ಎನ್ನುವುದು ಪ್ರತೀತಿ. ಪುರಾಣದಲ್ಲಿ ಕೇಳಿ ಬಂದಂತೆ ಇಲ್ಲಿನ ಬೆಟ್ಟದ ಮಧ್ಯದ ಭಾಗ ಕತ್ತರಿಸಿದಂತೆ ಇದೆ. ಬಿಲ್ಲು ಹೂಡುವಾಗ ನೆಲಕ್ಕೆ ಮಂಡಿಯೂರಿದ ಕುರುಹಾಗಿ ಇಂದಿಗೂ ಅಲ್ಲಿ ಕಪ್ಪು ಶಿಲೆಯೊಂದರಲ್ಲಿ ಕುಳಿ ಬಿದ್ದಿರುವುದನ್ನ ಕಾಣಬಹುದು.

ಮತ್ತೊಂದೆಡೆ ಅದೇ ಸ್ಥಳದಲ್ಲಿಂದ 10 ಕಿ. ಮೀ ದೂರದಲ್ಲಿದ್ದ ಬೆಟ್ಟ ರಾಮ ಹೂಡಿದ ಬಾಣಕ್ಕೆ ಎರಡು ಭಾಗವಾಗಿರುವುದನ್ನ ಸಹ ನೋಡಬಹುದಾಗಿದೆ. ಪ್ರತಿ ಶನಿವಾರ ಮತ್ತು ವಿಶೇಷ ದಿನಗಳಲ್ಲಿ ಇಲ್ಲಿ ಪೂಜೆ ನಡೆಯುತ್ತಿದ್ದು, ವಿವಿಧ ಭಾಗಗಳಿಂದ ರಾಮ ಭಕ್ತರು ಆಗಮಿಸುತ್ತಾರೆ. ವಿಶೇಷವೆಂದರೇ ರಾಮ ಸೀತೆಯ ಪ್ರತಿಮೆಗೆ ಪೂಜೆ ಸಲ್ಲಿಸಿ ಕಾರ್ಯ ಸಿದ್ಧಿಗಾಗಿ ವರ ಬೇಡಿದರೇ ಆತ ನೀಡುತ್ತಾನೆ ಎನ್ನುವುದು ನಂಬಿಕೆ. ಮಕ್ಕಳಾಗದೇ ಇರುವವರು ಸಂತಾನ ಭಾಗ್ಯಕ್ಕೆ ಇಲ್ಲಿ ಬಂದು ವರ ಬೇಡುತ್ತಾರೆ ಎನ್ನುತ್ತಾರೆ ಸ್ಥಳೀಯರು.

ರಾಮ ಬಿಟ್ಟ ಬಾಣಕ್ಕೆ ಎರಡಾದ ಬೆಟ್ಟ ಇಂದಿಗೂ ರಾಮನ ಕಿಂಡಿ ಎಂದೇ ಹೆಸರಾಗಿದೆ. ಬಲ ಬಿಟ್ಟ ಸ್ಥಳವನ್ನ ರಾಮರ ಪಾದವೆಂತಲೂ ಕರೆಯುತ್ತಾರೆ. ಸ್ಥಳ ಪುರಾಣದ ಬಗ್ಗೆ ಹೇಳುವ ತಾಳವಾಡಿ ಭಾಗದ ಜನ ತಮ್ಮ ಬೇಕು ಬೇಡಗಳಿಗಾಗಿ ರಾಮರ ಪಾದಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸುತ್ತಾರೆ. ಕಾಡಿನ ನಡುವೆ ಇರುವ ರಾಮರ ಪಾದದ ಕುರುಹು ಈ ಭಾಗದ ಜನರಿಗೆ ಬಲವಾದ ನಂಬಿಕೆಗೆ ಕಾರಣವಾಗಿದೆ. ಪ್ರತಿ ಶನಿವಾರ, ರಾಮನವಮಿ ಸೇರಿದಂತೆ ಅಮಾವಾಸ್ಯೆ, ಹುಣ್ಣಿಮೆ ದಿನಗಳು ಇಲ್ಲಿನ ವಿಶೇಷ ದಿನವಾಗಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಬಂದು ಹೋದ ಈ ಕುರುಹು ಈಗ ಆಕರ್ಷಣೆಯ ಕೇಂದ್ರಬಿಂದುವೂ ಆಗಿದೆ.
ಆನೆಗಳು ಹಾಗೂ ಹುಲಿ ಸಂಚಾರ ಇಲ್ಲಿ ಸಾಮಾನ್ಯವಾಗಿರುವುದರಿಂದ ಏಕಾಂಗಿಯಾಗಿ ತೆರಳಲು ಮತ್ತು ಮುಂಜಾನೆ ಹಾಗೂ ಸಂಜೆ 4ರ ಬಳಿಕ ದೇಗುಲ ಭೇಟಿ ಅಪಾಯಕಾರಿಯಾಗಿದೆ.
ಇದನ್ನೂ ಓದಿ: ಬೆಂಗಳೂರು-ಎಲ್ಲೆಡೆ ಶ್ರೀರಾಮ ನವಮಿ ಸಡಗರ: ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯ